Saturday, March 30, 2013

ಶೇಕ್ಸಪಿಯರೀಯ ಹುಳಿನರಿಯು

ಈಸ್ಟೂ ಬೂಸ್ಟೂ
ಅಥವಾ
ಶೇಕ್ಸಪಿಯರೀಯ  ಹುಳಿನರಿಯು



ಒಂದು ರಾತ್ರಿಯೆನ್ನ  ರೂಮೊಳಗೆಯೇ 
ಕೆಲಸದ ಚಾಪೆಯ ಮೇಲೆ ಹಾರಿಯೂ ಸಿಗದ 
ದ್ರಾಕ್ಷಿ ಹುಳಿಯೆಂದು ಹೊರಟ ನರಿ ಸಿಕ್ಕಿತು
ಅಚಾನಕ್ಕನೆಯಾಗಿಯೆಂಬಂತೆ 

ಅಲ್ಲಾ, ಈಗ ಹುಳಿಯೆಂದದ್ದು ಯಾರಿಗೆ ಕೇಳಿಸಲಂತ ?
-ಅಂತ ಕೇಳಿಕೊಂಡಂತೆ ನರಿ ಸಿಲುಕಿಕೊಂಡಂತಾಯಿತು. 

ಸ್ವಗತವೇ ಇರಲಿಕ್ಕೆ ಬೇಕು : 
ಶೇಕ್ಸಪಿಯರನ ಎಳೆ ತಂದೊಮ್ಮೆ ಕೇಳಬೇಕು... 

ನರಿ ಅಂತಂದರೇನು ಸುಮ್ಮನೆಯೇ ನರಿಯಾಯಿತೇ?
ನಡೆನುಡಿಯೆಲ್ಲ ಹುಳಿಹುಳಿಯಷ್ಟೇ ಅಲ್ಲ,
ತನುಮನವೆಲ್ಲವೂ ಸಹಾ  ಹುಣಸೇ ಹಣ್ಣುಹಣ್ಣಾಗಿ ನರೆತು
ಒಳಹೊರಗುಗಳು ಹೀಗೆ ಬೆರೆತು ಬಂದಿರಬೇಕು. 

ಈಗ, ನಿತ್ಯದಂತೆ ಹೊರಟಾಗ ದ್ರಾಕ್ಷಿ ಕಂಡಿರಬೇಕು,
ನೇರ ನಿಲುಕಿಗೆ ಸಿಗದಂತೆ ತುಸು ಎತ್ತರದಲ್ಲಿ ,
ಗೊಂಚಲು ಗೊಂಚಲಾಗಿ... 
ಹಾರಿ ಅಡ್ಜಸ್ಟು ಮಾಡಬಹುದೇನೊ..,
"ಏಕೆ ಮಾಡಬೇಕು??"
-ಅನ್ನೋದನ್ನ ಮೊದಲು ಕೇಳಬೇಕು.

"ಹಾರಿ ಕಿತ್ತು ಚಪ್ಪರಿಸೋದು ರಮ್ಯ"
ಕವಿಯಾಗಿ ನೋಡಿದರೆ, ಮೇಲಾಗಿ,
ಫ್ರಕ್ಟೋಸು ಪೋಷಕಾಂಶಗಳಿರುವಲ್ಲಿಗೆ ಒಂದು 
ಹೊತ್ತಿಗಾಗುತ್ತೆಯಾಗಿ ಈ "ದ್ರಾಕ್ಷ 
ರಸಕ್ಕೆ ಜಿಗಿದು ಜಂಪಿಸಿ 
ಟ್ರೈ  ಮಾಡೋದು ಬಡನರಿಯಾಜನ್ಮಸಿದ್ಧ ಹಕ್ಕು!"
- ನೆಹರೂ-ಸಮಾಜವಾದದರಸುತ್ತಿಗೆ ಹಾಗಂದಿರೋದು.

ಹಾಗೆ ಸಂಕಲ್ಪಮಹಾತ್ಮ್ಯವ ವಿವರಿಸಿ  
ಹಾರುವುದು,
ಹಾರಿ ಹಾರಿ ಬಿದ್ದು ಬಿದ್ದೂ  ಸಿಗದಿದ್ದರೆ 
ದೂರುವುದು:

"ಹಾರಿ ಬಿದ್ದೂ ದೊರಕದ್ದು 
ಹುಳಿಯಿದ್ದಿರಲಿಕ್ಕೇ  ಬೇಕು;
ನಮ್ಮೊಳ್ಳೆಯದಕ್ಕಾಗಿಯೇ ಹಾಗೊಂದು 
ಮ್ಯಾಚು ಮುಂಚೆಯೇ ಫಿಕ್ಸಾಗಿರಬೇಕು."

-ದೂರಲೇ ಬೇಕು ಕೃತಿ  ಸೋತಂತೆ
ಕಾಣುವೆಡೆಯೆಲ್ಲಾ ಇನ್ಯಾವುದೋ ಅಪರ
ವನ್ನಾರೋಪಿಸಬೇಕು ಮಹಾನ್ ಸನಾತನಿಯಂತೆ
ಪ್ರಲಾಪಿಸಬೇಕು ಸಕಲಾನಿಷ್ಟಕಾರಕ ಶನಿಯೆಂದೆಂಬ
ಪ್ರಕಲ್ಪವ, ಯಾರು ಕೇಳದಿದ್ದರೂ 
ತನಗೆ ಕೇಳಿಸುವಂತೆ. 

ನರಿಯೆಂಬುದು ಹಾಗೆ ಈಸ್ಟು 
ಬೆರೆತುಬಂದು ಹುದುಗಿದ
ಹುಳಿಹುಳಿಯಾದ ಹಿಟ್ಟನ್ನು 
ಬೂಸ್ಟು  ಬೆಳೆಯೋದಕ್ಕೆ ಮುನ್ನವೇ ತೆಗೆದು 
ಪದರು ಪದರಾಗಿ ಬೇಕಿಸಿದ 
ಲೇಯರ್ಡು  ಕೇಕು.