Saturday, June 20, 2020

ದೂರದಲ್ಲೆಲ್ಲೋ ದಿನ ಮುಳುಗಿದಂತೆ / kahin door jab din dhal jaayen / योगेश गौर


ಇತ್ತೀಚೆಗೆ ನಿಧನರಾದ ಹಿಂದಿ ಚಲನಚಿತ್ರಗೀತಸಾಹಿತಿ, ಶ್ರೀಯುತ ಯೋಗೇಶ್ ಗೌರ್ , ಅವರ ಬಗ್ಗೆ ನಮಗೆ ತಿಳಿದದ್ದು ಕಡಿಮೆಯೇ... 
ಹಾಗಿದ್ದಾಗ್ಗೆಯೂ, ಹೃಷಿಕೇಶ ಮುಖರ್ಜಿಯವರ ದಿಗ್ದರ್ಶನದ 'ಆನಂದ್' ಸಿನೇಮಾದಲ್ಲಿ ಅವರು ಬರೆದ, ಮುಖೇಶ ಹಾಡಿದ, ರಾಜೇಶ್ ಖನ್ನನ ಅಭಿನಯಿಸಿದ ಈ ಭಾವಗೀತಾತ್ಮಕ ಹಾಡು ನಮ್ಮ ಯಾವತ್ತು ಹೃನ್ಮನಗಳನ್ನು ಅದೆಂದೂ ತಾಕಿದ್ದಿದು ಹೌದು.

ಹಾಡಾಗಿಸಿ ಅಮರರಾದವರೆಲ್ಲರಿಗೂ ಕಿರುಕಾಣಿಕೆಯಾರ್ಪಣೆಯಾಗಿ ಈ ಹಾಡನುವಾದ.


   ************************************ 


ಎಲ್ಲೋ ದೂರದಿ
ದಿನ ಮುಳುಗಿದಂತೆ
ಗೋಧೂಳೀ ವಧುವದು
ವದನ ಕದ್ದಂತೆ
ಸದ್ದಿಲದೇ ಬಂದಂತೆ

ಎನ್ನ ಕಲ್ಪನೆಗಳಾಂಗಳದಲಿ
ಯಾರೋ ಕನಸುಗಳ
ದೀಪ ಹಚ್ಚಿದಂತೆ

**

  ಅದೊಮ್ಮೆ ಉಸಿರದು ಭಾರವಾದಂತೆ
ತುಂಬಲು ಕಂಗಳು ಇದ್ದಕಿದ್ದಂತೆ

ಆಗ್ಗೆಯೇ ಮಿಡಿದು
ಒಲವಲಿ ನಡೆದು
ಸ್ಪರ್ಶಿಸುವರಾರೋ ಎನ್ನ
ಅದೃಶದಲೆಂಬಂತೆ

**

ಒಮ್ಮೊಮ್ಮೆಯೆಲ್ಲಿ ಹೃನ್ಮನ ಸೇರವೊ ಅಂತೇ  
ಬಂದಾವು ಸಂಬಂಜ ಜನ್ಮಾಂತರವೆಂಬಂತೆ 

ಘನ ಸಂಕಟವು
ವೈರಿಯೆನ್ನ ಮನವು
ನನ್ನದಾಗಿಯೂ ಸಹಿಪುದು
ಅವರ ನೋವಂತೆ

**

ಅರಿವುದು ಎದೆಯದು ಗುಟ್ಟೆಲ್ಲದನು
ಹೊಂಗನಸುಗಳನು ಹೊಳೆಯಿಸುವುದನು

ಎನ್ನೀ ಕನಸುಗಳು
ಇವೇ ನನ್ನವುಗಳು
ಎನ್ನನಗಲಾರವು
ಇವುಗಳ ನೆರಳೂ.

***


  *****************************************************


ಅನುವಾದಿಸುವಾಗ ಹೊಸದಾಗಿ ಕಣ್ಣ ಕೋರೈಸಿದ ಈ ಹಾಡಿನ ಸಾಲುಗಳ ತನ್ನದೇ ಆದ ಸಾಂಧರ್ಭಿಕ ಅನ್ವರ್ಥತೆಗಳು ಮತ್ತೊಮ್ಮೆ ಹೃನ್ಮನಕಂಗಳನ್ನು ಭಾರವಾಗಿಸಿದವು.
 
ಹಾಗ್ಗೆ, ಅನುವಾದಕ್ಕಿಳಿವ ಮುನ್ನ ಎಲ್ಲವೂ ಗೊತ್ತು ಎನಿಸುವುದು -- ಅನುವಾದಕ್ಕಿಳಿದಾಗ ಇದೆಲ್ಲ ಗೊತ್ತೇ ಇರಲಿಲ್ಲವಲ್ಲ ಎಂದಾಗವುದು.., ಇದೆಲ್ಲ ಯಥಾಪ್ರಕಾರವೇ!
 
ಈ ಹಾಡಿನ ಸಂಗೀತ ನಿರ್ದೇಶಕ ಸಲಿಲಚೌಧರಿಯವರು ಬೆಂಗಾಲಿಯಲ್ಲಿ ಇದೇ ಧಾಟಿಯಲ್ಲಿ ಈ ಮುಂಚೆಯೇ ಇನ್ನೊಂದು ಹಾಡನ್ನು ಸಂಯೋಜಿಸಿರುವುದೂ ತಿಳಿಯಿತು. ಅದರ ಸಂದರ್ಭ-ಅರ್ಥಗಳೆಲ್ಲ ಬೇರೆಯಿದ್ದರೂ ಸಂವೇದನಾಶೀಲವಾಗಿಯಂತೂ ಇರುವುದು ಅನುಭವವೇದ್ಯವಾಯಿತು.

ಅಂದರೆ, ನಮ್ಮ ಈ
ಪ್ರಸ್ತುತ ಚಿತ್ರಗೀತ ಸಾಹಿತಿ ದಿವಂಗತ ಶ್ರೀ ಯೋಗೇಶ್ ಗೌರ್ ಅವರು, ಆನಂದ ಸಿನೆಮಾದ ಸಂದರ್ಭದೊಟ್ಟೊಟ್ಟಿಗೆ ಈ ಮೊದಲೇ ಸಂಯೋಜಿತವಾದ ಸಂಗೀತಕ್ಕೆ ತಕ್ಕಂತೆ ಬರೆಯುವ ಪಣವನ್ನು ಸಹಾ ಏಕಕಾಲದಲ್ಲಿ ಸುಲಲಿತವಾಗಿ ನಿಭಾಯಿಸಿದ್ದಾರೆ ಎನ್ನಬಹುದು. ಅವರಿಗೆ ನಮ್ಮ ನಮನಗಳು.