ಶುಕ್ರವಾರ, ಡಿಸೆಂಬರ್ 2, 2016

Dówn upon Rice - Bath khas hind hai!


rice-bhath-haters ke liye
rice me bathnEwale ek
yah bath
bante hai:


 rice early,
 its super-bhath!
 else,
 by the time it dawns upon you,
 it would be supper-bhath!!


*************


dawn or dusk,
southindies
all rice!


*************


ಹಿಂದೆಂದಿನ ವಿದ್ಯಮಾನವಾದ
ಹಿಂಬಾಗಿಲಲ್ಲಿ ಹಿಂದಿ
hairike ya airike
ya  ಹಕೀಕತ್ತೇನೂ ಅಂಥಾ
Kkhaaass bhathE!


ಹಿಂದಿ
ಅರ್ಥವಾಗುವವರೂ
ಆಗದವರೂ
ಏನೇ ಮೂಲಾಜು ನೋಡಿದರೂ
ಹಿಂದಿಂದಾದರೂ  hEluttiruvudaadaró
ಹಿಂದೆಂದೋ ಹಂಗೇ ನುಂಗಿಕೊಂಡಿದ್ದ  bathE ಅಲ್ವೇ!

ಶನಿವಾರ, ಸೆಪ್ಟೆಂಬರ್ 26, 2015

ನಿಗಮನ

ಒಂದು ಅತೀ ಸಣ್ಣ ಪ್ರಭಂಧ/ಕಥೆ/ಭಯಾಗ್ರಪಿ/ಏನೋಒಂದು




ತೋಳ್ಪಾಡಿಗೆ ಬಸ್ಸು ಹತ್ತಿಸುತ್ತ
"
"ಬ್ರಹ್ಮಸತ್ಯವು ಅನಿರ್ವಾಚ್ಯವಾಗಿ ಬೆಂಗಳೂರಿನ ರಸ್ತೆಗಳ ಈ ದುರವಸ್ಥೆಯಾಗಿದ್ದು"
ಅಂತನ್ನುವುದನ್ನ ಸಿನಿಕತನವೆಂದೇ ಹೇಳಬೇಕಾಗುತ್ತದೆ
"

ಅಂತ ನಕ್ಕುನುಡಿಹಾರಿಸಲೆಸೆವಾಗ್ಗಿನಂದಿನ ಮಬ್ಬಲ್ಲೂ
ಡಯಲೆಕ್ಟಿಕ ಸಂಶಯದೆಳೆಯದಿಲ್ಲದಿರಲಿಲ್ಲ.

ಗುರುವಾರ, ಜುಲೈ 16, 2015

ತಾರ್ಕಿಕಾಂತ

ಒಬ್ಬ
ತಾರ್ಕಿಕ
ಅಂತ್ಯಕ್ಕೆ
ಹಲಬುವ

ದಿಸ್ ವೇ ಅಥವಾ ದಟ್
ವೇ ಆಗಬೇಕು
ಅಂತ
ಕೂತು
ಬಿಡುವವ
ಹತ್ತು ಸಂಭಾವ್ಯತೆಗಳ
ಪಟ್ಟಿ ಮಾಡೋಕ್
ಅಂತ
ಅನೆಕ್ಸ್'ಪೆಕ್ಟೆಡಂತ
ಯಾವ್ದೂ ಆಗಬಾರದಂತ

ಪ್ರಿಪೇರ್ ಫಾರ್ ದ ಬೆಸ್ಟ್ ಅಂತ
ಯಾಕಂತ?
ಬೆಸ್ಟು ಮಿಸ್ಸು
ಮ್ಯಾನೇಜಾಗಿ ವರಸ್ಟಾಗದಿರಲಂತ

ಮತ್ತ ಬೀ ಗ್ರೇಸಿಯ-
ಸಂತ
ದಿಸ್ಸಾಗದ ದಟ್ವರಸ್ಟಿಗೆ
ಪ್ರಿಪರೇಶನ್ನು ಅಷ್ಟೇ
ಆಗೋದಾಂತ
...

ಹಾಗೆ ಹ್ಯಾಗೂ ಬಂದವರಸ್ಟ
ಸಂಭಾಳಿಕೆ ಕಷ್ಟಸಾಧ್ಯವಾಗಿಬಿಟ್ಟ-
ದಾಂತ

ನೀ-
ರಸದಿ
ರೆಸ್ಟಿಲ್ಲವಾದ ರೋಮರ್ಹೋಮರನೇ

ಪ್ರಿಯ ತಾರ್ಕಿ
ಕಾಂತನೇ
ಸ್ಕೀಮರನೇ

ಮಾತಲ್ಲಿ ನಂಬಿಕೆ ಯಾವತ್ತೋ ಕಳ್ದು
ಹೋಗಿ ಕೊಳ್ಳೋಕ್ಕೆ ಈಹೊತ್ತು ಹಾ ಹಾ
ತೊರೆವವನೇ,

ಸರಿಯಾದ್ಮಾತೇ
ಹೇಳ್ಬೇಕಂತ ಎಣಿಸೋದು

ಸಾಧುವೇ?

'ಹಾಸ್ಯಾಸ್ ಪದ' ಅಲ್ವೆ??

ಹತ್ತೆಣ್ಸಿಕೂತಲ್ಲಿ ಹನ್ನೊಂದು
ಆಗೋದೇ

ಮರೀತಿರುವೆ

ವಾಸ್ತವ

ಚಿತ್ರಿಸಿದ್ದರಿಂದ ವಿಚಿತ್ರಾಂ

.

ಶುಕ್ರವಾರ, ಮೇ 15, 2015

ಅರ್ಥವನ್ನೋದು...

ಅರ್ಥವನ್ನೋದು  ಹೆರ 
ಸೆಳೆತದಂತೆ
(ತನ್ನ ಎರಡೂ ಅರ್ಥಗಳಲಿ ಕೂಡ)
ಹರಹಿನೊಳೆಲ್ಲೇ ಬಿದ್ದರೂ ಕಡೆಯಲಿ
ಮಿತಿಸುತ್ತನಪ್ಪೋದಂತೆ 
ನಿಧಾನವಾಗಿ
ಚಲಿಸುತ್ತಲೇ ಇದ್ದುದಾದರೆ 
ಹಾಗೆ ಬದಲಾಗುತ್ತಲೇ ಇರೋದಂತಾದರೆ
ಐಡೆಂಟಿಟಿಯರ್ಥ ಕಳೆದು
ಗೊಳ್ಳೋದೇ ಆಯ್ತು 
ಥೀಸಿಯಸ್ಸನ ಷಿಪ್ಪಂತೆ

 
*****


ವ್ಯಕ್ತಿ ಕೇಂದ್ರದಲ್ಲೇ
ತಾನೇ ತಾನಾಗುಳಿದರೂ
ಮೂಲಾssಧಾರ ಬೀಜದಲ್ಲೇ
ಸ್ಪೋಟವಿದ್ದದರss ಕುರುಹಾಗಿ 
ವಿಶ್ವಕಿರಣಸಮುದ್ರ ಹಿನ್ನೆಲೆಯಲಿದ್ದಂತೆ
ಅಲ್ಲಿ ಆಲದೆಲೆಯಲ್ಲಿ ತೇಲಿಕೊಂಡಿದ್ದಂತೆ
ಅಲೆಗಳಲ್ಲಿ ಏನೆಲ್ಲ ಬಂದು ಬಡಿಯುತಿರುವಂತೆ 
ಶಬ್ಧಗದ್ದಲದ ಆ ಪರಿ
ಭಾಷೆಯಲಿ ಮತ್ತೆಯರ್ಥವನ್ನೋದಂತೂ ಶುದ್ಧ 
ಸಾಂದರ್ಭಿಕ ವಿದ್ಯಮಾನವಂತೇss  


******


ನಾವು ಗೂಡುತ್ತ ನಡೆವಂತೊಮ್ಮೊಮ್ಮೆ 
ಯೊಂದರ್ಥ ಮೂಡಿದಂತಾಗುತ್ತೆ ಕೂಡ 
ವಾದರದರಾಚೆಗೂ-
ಢ ಬಿಡಿ ಬಿಡಿ 
ಬೈಫರ್ಕೇಟಾಗುತ್ತ
ದೂರ ಸರಿಯುತರ್ಥಗಳನಂತಾನಿಯತ 
ಹಾರ್ಮೋನಿಕ ಸರಣಿಯೊಂದಂತೆ 
ಕಡೆಗೋಲ ತಿರುತಿರುಗಿಸುತ ಹೊಡೆಹೊಡೆದಂತೆ 
ಕೂಡಿಬಂದಂತೆ ಬೆಣ್ಣೆ 
ಕರಕರಗಿ ಹೋಗುವುದಂತೇss

*******



---------------------------------------------------------------------------------------------
ಹಿಂನೆಲೆವೀಡುಗಳು :


ಬುಧವಾರ, ಜನವರಿ 21, 2015

ನಿರ್ವಿಕಲ್ಪ ಚಿತ್ತದ ಚಿರಂತನ ಬೆಳಗು

(ಇದರ ಹಿಂದಿನೊಂದು ಭಾಗ ಇಲ್ಲಿದೆ)


ನರಜಾಲಗಳ ಗೊಂಡಾರಣ್ಯಗಳ ಗೂಢ ಗಹ್ವರಗಳಲಿ
ಅಮೂರ್ತ ಸಂಕೇತ ಅನಿರ್ವಾಚ್ಯ ವ್ಯಕ್ತಿವಿಶಿಷ್ಟಾನುಭವಗಳಲಿ
ಅರ್ಥರಾಹಿತ ಪೂರ್ಣತಾಭಾವ ಶೂನ್ಯಘಳಿಗೆಗಳಲ್ಲಿ
ಸನ್ನಿವೇಶವಿಲ್ಲದ ಹಿನ್ನೀರ್-ನಿರರ್ಥದಲಿ

ಹುದುಗಿಸಲಿ ನಿನ್ನನೆಲ್ಲಿ
ನನ್ನಲಿ
ನೀನಿರದುದೆಲ್ಲಿ
ನೆನಪುಗಳು ಮುತ್ತಿಕ್ಕಿ ಬರದುದೆಲ್ಲಿ

ಕೆದಕಲೇ ಸ್ಮೃತಿ
ಕೋಶಕೋಶಗಳಾಳಗಳಲಿ
ಹುದುಗಿ ಬಂದವುಗಳಲಿ
ಚರಿತ್ರೆಗಳ ಕಮಟು ಪುಟಗಳಲಿ
ಶಿರ ಹುದುಗುವ ಅವಮಾನಗಳದ್ಯಾವುದೋ ಒಣ ಉಸುಕಿನೂರೊಂದರಲಿ
ಹೃದಯವೇ
ಹುದುಗುವುದೇ ಉಷ್ಟ್ರಪಕ್ಷಿಯೋಪಾದಿಯಲಿ?


ಅಳಿಸಿದುದಕ್ಕಾಗಿ ನಿನ್ನಿಂದ ನೀ ನನ್ನ
ನಳಿಸ ಹೊರಟಿದುದು ನನ್ನೊಳಗಿನಾನಿನ್ನನಿದ
ರೊಳಳಿಸಿ
ಹೋಗುವುದು ನಾ ನನ್ನೊಳಗಿಂದ
ಲಿಂದಿದಾಗದೆಂದು ಧ್ವನಿಯೊಂದು ಹೊರಟಿದು
ದದುವೆ ನಾನ್ನೆನ್ನುವುದು ನೀನನ್ನುವುದಲ್ಲಿ ಚುಂಗೊಂದನಿಡುವುದು
ಹಿಡಿದದನು ಅಭಿಸರಿಪುದು ಅಭಿಸಾರಿಕೆಯತ್ತ
ಮರಳೋಣ ಮತ್ತೆಯರಳೋಣ
ಅರಳುಮರಳಂತಿರುವಲ್ಲಿಂದ ಮತ್ತೆ....

---------------------------------------------------------------------------------------------------------------
ಇದು ಮುಂದುವರಿದ ಪ್ರತಿಸ್ಪಂದನದ ಯಾದೃಚ್ಛಿಕ ಭಾಗ,
 "Eternal Sunshine of the Spotless Mind"
ಎಂಬ 'ಅನೇರ ನಿರೂಪಣೆ 'ಯ ಸಿನೆಮಾಗೆ ...

ಈ ಮುಂಚೆ ಇದರ 'ಶೀರ್ಶಿಖೆ'ಯನ್ನು 'ಅನಂಗಚಿತ್ತದ ಅವಿರತ ಹೊಳಹು' ಅಂತಿಟ್ಟುಕೊಂಡಿದ್ದು ಹೌದಾದರೂ...

'spotless' ಎಂಬುದರ ಅರ್ಥ 'ಕಲೆರಹಿತ' ಅಂತಾಗುತ್ತದೆಯೇ ಹೊರತಾಗಿ
'ಜಾಗ್ಗೆ-ಯಿಲ್ಲದ' (spot-less) ಅಂತಲೇನೂ ಬಳಕೆಯಲ್ಲಿಲ್ಲವಂತ ಜ್ಞಾನೋದಯವಾಯಿತಾದರೂ...

ಅರ್ಥೈಸಿದಂತೆ ಕಾವ್ಯವಲ್ಲವೇ? ಅವರವರಿಗಾದದ್ದೂ ಅರ್ಥವಲ್ಲವೇ?
ಚಿತ್ತವು ಮಸ್ತಿಷ್ಕವೇ ಅಥವಾ ಇನ್ಯಾವುದೋ ಒಂದು ಜಾಗ್ಗೆಯಲ್ಲಿ ಇದೆ/ಇಲ್ಲ ಎನ್ನುವುದು ಎಂದಿಗೂ ಅನಿರ್ಧಾರಿತವಷ್ಟೇ?
ಎಂಬಿತ್ಯಾದಿ ಜಿಜ್ಞಾಸೆಗಳು ಉಳಿಯಿತಾಗಿಯಾದರೂ ...

ಪೋಪರ ಕವನವನ್ನೂ, ಕೌಫ್ಮನ್ನರ ಚಿತ್ರಪಟವನ್ನೂ ತುಲನಾತ್ಮಕವಾಗಿ ಗಮನದಲ್ಲಿರಿಸಿ...

"ನಿರ್ವಿಕಲ್ಪ ಚಿತ್ತದ ಚಿರಂತನ ಬೆಳಗು" ಅಂತಮುಂತಾಗಿ ಮುಂದಾದದ್ದು...
---------------------------------------------------------------------------------------------------------------

ಹೊತ್ತೂ ಹೋಗುವುದೂ

ಹೊತ್ತು

ಕೊಂಡು 
ಹೋಗುವಾಂದರ
ಕೂತss ಇರಾದು;
ಇಲ್ಲದಿದ್ದರ
ಹೋಗಿರ್ಬೋದು.


----------------------------------------------------------
"ಹೊತ್ತುಕೊಂಡುಹೋಗುವುದು" ಎಂಬ ಶ್ಲೇಷೆಯಲ್ಲಿ 
ಒಂದು ಸಾಧಿಸುವಲ್ಲಿ ಇನ್ನೊಂದಾಗದು.

ಭಾನುವಾರ, ಡಿಸೆಂಬರ್ 7, 2014

ಈ ತಿರುವಿನಿಂದ ಹೊರಡುವವು / Is Mod Se Jaate Hain

ಈ ತಿರುವಿನಿಂದ ಹೊರಡುವುದು 
ತುಸು ಭಾರನಡೆ ರಸ್ತೆಗಳು 
ತುಸು ತೀವ್ರನಡೆ ಹಾದಿಗಳು

ಕಲ್ಲಿನ ಹವೇಲಿಗಳಿಗೆ
ಗಾಜಿನ ಮನೆಗಳಲಿ
ತುಣುಕುಗಳ ಗೂಡಿನವರೆಗೆ
ಈ ತಿರುವಿನಿಂದ ಹೊರಡುವುದು

ಬಿರುಗಾಳಿಯಂತೆದ್ದು ಹಾದಿಯೊಂದು ಹಾಯುವುದು
ನಸುನಾಚಿದಂತ್ಯಾವುದೋ ಪದಗಳಿಂದ ಹೊಮ್ಮುವುದು

ಈ ರೇಶಿಮೆಹಾದಿಗಳಲಿ
ಹಾದಿಯೊಂದು ಅದೂ ಇದ್ದೀತು
ನಿನ್ನ ವರೆಗೆ ತಲುಪುವಂತದ್ದು
ಈ ತಿರುವಿನಿಂದ ಹೊರಡುವುದು

ದೂರದಿಂದೊಂದು ಸಾರುವುದು
ಬಳಿಸಾರಿಯು ಹೊರಳುವುದು
ಒಬ್ಬಂಟಿಯೊಂದು ಹಾದಿಯು
ನಿಲಲಾರದು ಚಲಿಸಲೂ ಆರದು

ಇದ ಯೋಚಿಸಿ ಕುಳಿತಿರುವೆ
ಹಾದಿಯೊಂದು ಅದೂ ಇದ್ದೀತು
ನಿನ್ನ ವರೆಗೆ ತಲುಪುವಂತದ್ದು
ಈ ತಿರುವಿನಿಂದ ಹೊರಡುವುದು 

---------------------


ಗುರುವಾರ, ನವೆಂಬರ್ 27, 2014

ಆಹಕ್ಕೆ ಬೇಕು / Ah! does require / आह को चाहिए || ಘಾಲಿಬ್ / Ghalib / ग़ालिब

ಆಹಕ್ಕೆ ಬೇಕು ಒಂದಿಡೀ ಆಯಸ್ಸು ನೆತ್ತಿಗೇರುವವರೆಗೆ
ಯಾರು ಬದುಕಿಯಾರು ನಿನ್ನ ಮುಂಗುರುಳಿನ ಚಿತ್ತವಾಗುವವರೆಗೆ 

ಜಾಲ ಪ್ರತಿಯಲೆಯಲೂ ಇವೆ ಜಾಲಾಡುತ್ತ ಶತದಂತ ಮಕರಗಳು
ನೋಡೋಣವೇ, ಏನೆಲ್ಲವಾಯ್ತು ಹನಿಗಳಿಗೆ ಮುತ್ತಾಗುವವರೆಗೆ

ಅನುರಕ್ತಿ ತಾಳ್ಮೆ-ಬೇಡೋಣವು; ಅಭೀಪ್ಸೆಯೋ ಚಡಪಡಿಸೋಣವು
ಹೃದಯದ್ದೇನು ಬಣ್ಣವನ್ನೋಣವೋ --  ರಕ್ತ-ಹರಿಯೋಣದವರೆಗೆ

ಒಪ್ಪೋಣ, ನೀ ಅಸಡ್ಡೆ ಮಾಡುವುದಿಲ್ಲವಂತ, ಆದರೂ
ಬೂದಿಯಾಗುವೆವು ನಾವಂತೂ, ನಿಮಗೆ ತಿಳಿಯುವವರೆಗೆ

ನಸುಕಿನ ಕಿರಣಗಳಿಂದಲಿದೆ ಮಂಜಿನ ಹನಿಗಳಿಗೆ ಲೀನವಾಗುವಿಕೆಯ ತಾಲೀಮು
ನಾನೂ ಇರುವೆ, ಒಂದು ದಯದೃಷ್ಟಿಯಾಗುವವರೆಗೆ

ಒಂದು ದೃಷ್ಟಿ  ಸಾಲದು ಇಡೀ ಜೀವನಕೆ, ಖಬರಿಲ್ಲದವಳೇ
ಒಟ್ಟಂದದಾ ಶಾಖವಿದೆ  ಕುಣಿಯುವ ಕಿಡಿಯೊಂದಿರುವವರೆಗೆ

ಅಸ್ತಿತ್ವದಾ ದುಃಖದ್ದು, ಅಸಾದ, ಇನ್ಯಾವುದರಿಂದಾದೀತು ಮರಣವಲ್ಲದೇ ಇಲಾಜು
ದೀಪ ಉರಿಯುವುದು ಯಾವತ್ತು ಬಣ್ಣಗಳಲಿ ಬೆಳಕಾಗುವವರೆಗೆ...





ಬುಧವಾರ, ನವೆಂಬರ್ 26, 2014

ಅಥಃ ಕವಿ ಕಿರಣ ಪ್ರಕರಣಂ

"ಕತ್ತಲೆಗೆ ಹೆದರಿ ರವಿಯು ತನ್ನ ಕಿರಣಗಳನ್ನು ಬೀರದೆ ಇರುವನೇ?
  ದುರ್ಜನರ ನಿಂದೆಗೆ ಹೆದರಿ ಕವಿಯಾದವನು ಕಾವ್ಯ ರಚಿಸದೇ ಇರುವನೇ?"


-----------------------------------------------------------------------------------


ಪ್ರಿಯ ರನ್ನನೇ,
ವಿಷಯಗಳ ಮೇಲೆ ಬೆಳಕು ಚೆಲ್ಲುವ
ರವಿ, ವ್ಯಾಖ್ಯಾನ ಪ್ರಿಯ ಕವಿ
ಸಮಯ ಕುಪ್ಪಳಿದಾಯ್ತು
ಅಂತಾಗಿ
ಸ್ವಯಂಪ್ರಭೆಯಿಲ್ಲದವು ಕೂಡಾ, ಅಲ್ಲ,
ಸ್ವಪ್ರಭಾವಳಿ ಇಲ್ಲದವು ಮಾತ್ರ
ಝಗಮಗಿಸೋದು ಈಗ
ಲಂತೂ ಅಂಥಾ ಕಾವ್ಯ - ಕವಿಗಳು ಚಂದ್ರ
ನ ತೋರುಮುಖದಂತೆ ಬಿಳೀ
ಸೂರ್ಯನೆಡೆಗೆ ಮುಖ ಮಾಡೋದೂ ಇಲ್ಲ
ಸೂರ್ಯಕಾಂತಿ ಹೂ ಹಿಂಭಾಗವಿದ್ದಂತೆ
ಸದಾ ನೆರಳಿಗೀಡಾಗಿ ಗುಹ್ಯವೋಗುಹ್ಯ
ವಂತ ಕೂತುಬಿಡೋದು ಮರೆಯಲ್ಲಿ
ಮಂಜಿನ ತೆರೆಯಲ್ಲಿ
ಹೊತ್ತು ಹೋಗದವರು, ಮತ್ತೂ ಹೋಗ
ಬೇಕಾದವರು ತಂತಮ್ಮ ಕಂನಡಕಂಗಳ ಕೊಳಾಯ್ಸಿಕೊಂಡು
ಯಾವುದೋ ಟಾರ್ಚುದೀಪದ ಬೆಳಕಲ್ಲಿ
ಶೋಧಿಸ ಹೊರಟುಬರುತ್ತಾರೆ ನಮ್ಮೆಡೆಗೆ... 


===================================

ಮೇಲಿನದ್ದು ಮೊದಲು ಮೂಡಿದ ಸರಳ ಆಕೃತಿ 
ಅದನ್ನು ಈ ಕೆಳಗಿನಂತೆ ತಿದ್ದಿ ಇನ್ನೂ ಗೋಜಲು ಮಾಡುವುದರ ಮೂಲಕ 
ಅರ್ಥಾತರ್ಥಾರ್ಥ ಸಾಧ್ಯತೆಗಳನ್ನ ವಿಸ್ತರಿಸಬಹುದು...

===================================


ಪ್ರಿಯ ರನ್ನನೇ,
ವಿಷಯಂಗಳ ಮೇಲೆ ಬೆಳಕಂ ಚೆಲ್ಲುವ
ರವಿ, ವ್ಯಾಖ್ಯಾನಾಂಪ್ರಿಯ
ಕವಿ ಸಮಯಂ
ಮು  ಕುಪ್ಪಳಿದಾಯ್ತುಂ
ಮಂತಲಾಗಿ ಸ್ವಪ್ರಭಾವಳಿ
ಯಿಲ್ಲದವು ಕೂಡಾ
ಹೀನವು ಮಾತ್ರವು
ಝಗಮಗಿಸೋದು ಈಗ
ಲಂತೂ ಅಂಥಾ ಕಾವ್ಯ - ಕವಿಗಳು ಚಂದ್ರ
ನ ತೋರುಮುಖದಂತೆ ಬಿಳೀ
ಸೂರ್ಯನೆಡೆಗೆ ಮುಖ
ಮಾಡೋದೂ
ಇಲ್ಲ - ಸದಾ ಸೂರ್ಯಕಾಂತಿ
ಹೂ ಹಿಂಭಾಗವಿದ್ದಂತೆ
ನೆರಳಿಗೀಡಾಗಿ ಗುಹ್ಯವೋ
ಗುಹ್ಯವಂತ
ಕೂತುಬಿಡೋದು ಮರೆಯಲ್ಲಿ
ಮಂಜಿನ ತೆರೆಯಲ್ಲಿ ಮಬ್ಬ
ಹೊತ್ತು
ಹೋಗದವರು, ಮತ್ತೂ
ಹೋಗಬೇಕಾದವರು ತಂತಮ್ಮ ಕಂ
ನಡ
ಕಂಗಳ ಕೊಳಾಯ್ಸಿ
ಕೊಂಡು ಯಾವುದೋ ಟಾರ್ಚುದೀಪ
ದ ಬೆಳಕಲ್ಲಿ ಶೋಧಿಸ
ಹೊರಟುಬರುವರು
ನಮ್ಮೆಡೆಗೀಗ



------------------------------------------------------------------------------------------------------------
ಬಹುಶಃ ಓದುಗನೊಬ್ಬನಿಗೆ ಈ ಮೇಲಿನೆರೆಡು ಪ್ರಯತ್ನಗಳ ಮಿಶ್ರಣದಲ್ಲಿ ಆಗಬಹುದಾದ ಇನ್ಯಾವುದೋ ಒಂದು ರಚನೆ ಹೆಚ್ಚು ಅಪ್ಯಾಯಮಾನವಾಗಿ ಕಾಣಬಹುದು...  
ಆ ದಿಶೆಯಲ್ಲಿ ಈ ತಾಣದ 'ಸರ್ಜನೀಯ ಸಾಮಾನ್ಯ' ಲೈಸೆನ್ಸ್  ಅನ್ನು ತಂತಮ್ಮ ಪೊಯೆತಿಕ್ಕ್ಲು  ಲಯಿಸೆನ್ಸಿ ನ ಜೊತೆಜೊತೆಗೆ ಬಳಸಿಕೊಂಡು ಪ್ರಯತ್ನಿಸುವವರಿಗೆ ಸ್ವಾಗತವು ಈ ಮೂಲಕ ಅಂಡರ್ಸ್ಟುದ್ಗತವು!

ಸೋಮವಾರ, ಮಾರ್ಚ್ 24, 2014

ಲೂಸಿಡ್ಡಾಗಿ...

 ಲೂಸಿಡ್ಡಾಗಿ ಕನಸಿಸುವುದು

ನನ್ನೊಳಗಣ ಕನಸುಗಳ--ಆಶಯಗಳ ಪರಂಪರೆ
ಪರಂಪರೆಯಿಂದ ಮುಂದೋಡುವ ಥೀಸಸ್ಸನ ಶಿಪ್ಪು


ಬೆಳಿಗ್ಗೆ ಎದ್ದ ರೀತಿ - ಘಳಿಗೆ ಅಷ್ಟು ಮುಖ್ಯವಾಗಿದ್ದೇನಲ್ಲ. ಮಧ್ಯಾಹ್ನ ಸ್ವಲ್ಪ ಅನ್ಕಂಟ್ರೋಲ್ಡ್ ಹಾರಾಟ, ಕೊನೆಗೆ ಸ್ವನಿರಾಕರಣೆಗಳು. ಫಿಸಿಕಲಿ ಫಿಸಿಕ್ಸಿನಿಂದ ಹಿಡಿದು ಕಳರಿಪಯಟ್ಟಿಗೆ ಜಿಗಿದರೂ, ತರ್ಕಗಳ ವರ್ತುಲದೇಣಿಗಳನ್ನೇರುತ್ತಲೇ ಹೊರಟಿದ್ದ ಮನಸ್ಸು. ನಂಗೆ ನಾನಿರೋ ರೀತೀನೇ ಬೇಡವಾಗಿ ದೂರ ಓಡೊ ಯತ್ನದಲ್ಲಿ ಹಾಗೆ ಜಿಮ್ನಾಸ್ಟಿಕ್ ಜಿಗಿತಗಳನ್ನು ಪ್ರಯೋಗಿಸಿಕೊಂಡುಹೊರಟಿದ್ದು...

ಎಷ್ಟೇ ದ್ವೇಶಿಸಿದರೂ ನನ್ನ ನಾನು, ನನ್ನಿಂದ ನನಗೆ - ಆ ಘಳಿಗೆಯ ನನ್ನಿಂದ ನನಗೆ - ನಿರ್ಗಮನ - ಆ ಕ್ಷಣದ ನಿರ್ಗಮನ ನಿರ್ವಾಹಗಳಿಲ್ಲ. ಎಲ್ಲಿ ಒಡಿದರೂ ನಾನು, ನನ್ನನ್ನ ನೆರಳಿನಂತೆ  ನಾನು ಹಿಂಬಾಲಿಸಿಕೊಂಡು ಬರೋದು. ಅಥವಾ ಆ ವರ್ತುಲದೇಣಿಗೆ ಆ ಮಟ್ಟಿಗೆ ರೇಜಿಗೆಯಾಗಿ ಅದರಿಂದ ಬೇರೆ ವರ್ತುಲದೇಣಿಗೆ ಹಾರಿ ಬೀಳಕ್ಕೆ ಹೀಗೆ ಓಡುತ್ತ - ಅಥವಾ ಓಡಲೆತ್ನಿಸುತ್ತ - ಇರೋದು. ನೆತ್ತಿಮೇಲಣದಾಗಸದಲ್ಲಿ ಬೇರೆ ದಿಕ್ಕಿಂದ ಸೂರ್ಯನೋ, ಚಂದ್ರನೋ, ಅಥವಾ ಬೀದಿದೀಪವೋ ಮೂಡಿದರೆ ಆ ನನ್ನ ಛಾಯೆಯೇ ಬದಲಾಗಬಹುದಲ್ವ ಅಂತ ಕ್ಷೀಣ ಆಸೆ--ಆಕಾಂಕ್ಷೆಯ ಎಳೆಗಳು. ಹ್ಯಾಗೆ ಈ ಹೊತ್ತಿನ ನನ್ನನ್ನ, ನಾನು - ಈವತ್ತಿನ ಮಟ್ಟಿಗಾದರೂ - ಬದಲಾಯಿಸುವುದು..? ಊಹೂಂ.., keep hitting the attractor basin, keep ducking the ball...

ಹೀಗೆ ಅರೆಬರೆ ಮನಸ್ಸಿಂದ - ಅನ್ಯರೀತ್ಯಾ ತೀವ್ರ ಮನಸ್ಸಿಂದ - ಫಿಸಿಕಲಿ - ವರ್ಚುಯಲಿ ತುಯ್ದು ಅಲೆದಾಡುತ್ತ..  ..ಆಯಾಚಿತವಾಗಿ ಕಮೆಂಟುಯೋಗ್ಯ ಕವನ-ಕವಿ ಜೋಡಿ ಸಿಗುತ್ತೆ. 'ದುರಹಂಕಾರಿ' ಅಂತೂ ಜಾಗೃತ. 'ಅನಂಗ ಚಿತ್ತದ ಅವಿರತ ಹೊಳಹು' ಅಪ್ಲೋಡಾಗೋ ಹೊತ್ತಿಗೆ ರಾತ್ರಿ ಹತ್ತು ದಾಟಿ, ಅವಸರದಲ್ಲೆಲ್ಲೋ ಹೊಟ್ಟೆಪಾಡು ಮುಗಿಸ್ಕಂಡು, ಅಮ್ಮ-ಅಣ್ಣನ್ನ ಮಾತಾಡಿಸ್ಕಂಡು, ರಾತ್ರಿ ನಿದ್ದೆಯೇ ಹಾಳಾಗ್ಬೋದು ಅನ್ನೋ ವಾರ್ನಿಂಗ್ ಇಟ್ಕೊಂಡು, ಏನೋ ಒಕ್ಕಣೆಯಿಟ್ಟು 'ನಾಲ್ಕು ಸಮಸ್ತ'ರಿಗೆ '..ಹೊಳಹು' ಕಾಣುವಂತೆ ಕೊಂಡಿಯಡಕವಿಟ್ಟು ವಿ-ಭಿನ್ನವತ್ತಳೆ ಕಳಿಸುವಹೊತ್ತಿಗೆ ಹನ್ನೆರಡು ದಾಟಿ ಅಲ್ಲೇ ಕಣ್ಣೆಳೆಯುತ್ತಿದ್ದುದು. ಹಾಗೆ ನನ್ನ ನಾನು ಹುಸಿ-ಬಲವಂತ ದೂಡಿಕೊಂಡು ರೂಮಿಗೆ ಬಂದು ಬಿದ್ದುಕೊಂಡಿದ್ದು ತಾತ್ಕಾಲಿಕವಂತಂದುಕೊಂಡು, ಉಟ್ಟ ಬಟ್ಟೆಯಲ್ಲಿಯೇ. ಮತ್ಯಾವಾಗಲೋ ಎಚ್ಚರಾದಾಗ ಲೈಟು ಹಾಗೇ ಉರೀತಿದ್ದುದು, ಪ್ಯಾಂಟು ಅಲ್ಲೇ ಸ್ವಲ್ಪ ಸಡಿಲ ಜಾರಿಕೊಂಡಿದ್ದುದು, ಯಾವ ಮಾಯಕದಲ್ಲೋ ಬೆಡ್ಷೀಟು ಎಳಕೊಂಡಿದುದು...

*****

ಊಹೂಂ !
ನಾನು ಬರೆಯಲಿಕ್ಕೆ ಎದ್ದು ಕೂತದ್ದು ಈ ಪುರಾಣವನ್ನೇನಲ್ಲ. ಕೇಂದ್ರ ವಿಷಯ ಸ್ವಲ್ಪ ಬೇರೆಯೇ. ಆದರೆ ಕಥಿಸುವುದರ ಕುರಿತಾಗಿಯೇ ಇರುವ ನಮ್ಮದೊಂದು ಥಿಯರಿಯಿದೆ : ಯಾವುದೇ ಒಂದು ಸ್ಪುರಣೆಯು ಅದರ ಅಮೂರ್ತತೆಯಿಂದಾಚೆಗೆ ಕೆಳಪಟ್ಟು ರಕ್ತಮಾಂಸಗಳ ಜೀವಾಕೃತಿಯಾಗಿ - ಅನುಭಾವವಾಗಿ - ಬಂದಿಳಿಯುವುದರ ಹಿನ್ನೆಲೆಯಲ್ಲಿ ಅದನ್ನ ಹಾಗೆ ವಿಶಿಷ್ಟಗೊಳಿಸುವ - transcend ಮಾಡುವ ಒಂದು ಪರ್ಯಾವರಣ - context -ಇರುತ್ತೆ. ಆ ಒಂದು ಅನುಭಾವಕ್ಕೆ ಪಾತ್ರನಾದವನಿಗೆ ಮಾತ್ರವೇ ಆಪ್ತವಾದ ಒಂದು ಲೋಕದಲ್ಲಿ ಆ ಒಂದು ಸೃಜನಕ್ರಿಯೆಯು ಘಟಿಸಿರುತ್ತೆ. ಎಷ್ಟೋ ಬಾರಿ ಆ ಹಿನ್ನೆಲೆಗಳನ್ನ ಕಲೆಯಲ್ಲಿ ದಾಟಿಸುವ ಯತ್ನವಿರದೇ, ಅಥವಾ, ದಾಟಿಸುವ ಯತ್ನವಿದ್ದೂ ಅದು ಸೋತು, ಇಡೀ ಸೃಜಿತಹೃದಯವೇ 'ದಾಟದೇ' ಉಳಿದುಬಿಟ್ಟ ಆರೋಪಗಳಾಗುತ್ತವೆ. ಹೆತ್ತಿದ್ದು ಎಷ್ಟೇ abstract ಆಗಿದ್ದರೂ ಹೆತ್ತವರಿಗೆ ಅದು ರಕ್ತಮಾಂಸಗಳಿಂದ ಮೈವೆತ್ತ ಮುದ್ದ್ದುಕೂಸಾಗಿಯೇ ಕಾಣುತ್ತಿರುತ್ತೆ. ಆದರೆ ಅದರ ಕುರಿತು ಸರಿಯಾಗಿ ಅನುಭವ-ಪ್ರವೇಶಗಳಿಲ್ಲದಿದ್ದವರಿಗೆ - ಇದ್ದವರಿಗೂ ಕೂಡಾ ಕೆಲವೊಮ್ಮೆ - ಅದು ಬರೀ ನೀರಸ-ನಿರ್ಜೀವ ಬಡಬಡಿಕೆಗಳಾಗಿ ಕಂಡುಬರುವ ವಿದ್ಯಮಾನದೊಂದಿಗೆ ಕೃತಿ ಯಾ ಕೃತಿಕಾರ ಸೋತ ಆರೋಪಗಳು ಆಗಿ ಬರುತ್ತವೆ.

ಓದುಗನಿಗೆ ಇದನ್ನ ನೀಗಿಕೊಳ್ಳಲು "ಅರ್ಥವಾದ ಸಾಲುಗಳ ಬೆಳಕಲ್ಲಿ ಅರ್ಥವಾಗದ ಸಾಲುಗಳನ್ನ ಓದಿ" ಎನ್ನುವ ಎಕ್ಸಪರ್ಟ್ ವಿಮರ್ಶಕರ ಸಲಹೆ ಇದೆ. ಆದರೆ ಕೃತಿಕಾರ ಹ್ಯಾಗೆ 'ಇಂಪ್ರೋವೈಸ್' (ಹೆರುವವರ ನಿಘಂಟಿನಲ್ಲಿ ಹಾಗೊಂದು ಪದದ ಇರುವಿಕೆಯೇ ಬಹುಮಟ್ಟಿಗೆ ಸಂಶಯ!) ಮಾಡಿಕೊಳ್ಳಬಹುದು..? ಇಲ್ಲಿ ಹಿಂದೂಸ್ತಾನಿ ಕಛೇರಿ ಪದ್ದತಿ ಒದಗಿಬರಬಹುದು : ಮೊದಲು ಮಂದ್ರಾಲಾಪಗಳ ಆಸ್ಥಾಯಿ ಹಿಡಿದು ತನ್ಮೂಲಕ ಕೃತಿ ಆಗಿ ಬರಬೇಕಾದ context/ಪರ್ಯಾವರಣ/ಲೋಕವನ್ನು 'ಕಟ್ಟಿಕೊಡುವುದು'; ತದನಂತರ ಸ್ವಮನೋಧರ್ಮದ ವ್ಯಭಿಚಾರೀಭಾವಗಳ ಚಲನೆಗಳ ಹೊಳೆಯಿಸುವುದು.

--ಮಲಗುವ ಮುಂಚಿನ ತುಯ್ದಾಟಗಳ ಹೊತ್ತಲ್ಲಿ ಕಪೋಲದಲ್ಲಿ ಹಾಗೊಂದು ಥಿಯರಿಯ ಅಲೆಗಳು ಕೂಡಾ ಅಲೆದಾಡಿಕೊಂಡಿದ್ದವು.

*****

ನಮ್ಮ ಈ ಎಲ್ಲ ವೈಯಕ್ತಿಕ ಹಾರಾಟ ಹೋರಾಟಗಳ ಪ್ರಾಚೀನ ಅರ್ವಾಚೀನ ಪರಂಪರೆಯಲ್ಲಿ ಜೋಡಣೆಯಾಗುತ್ತ ಬರುವವು ನಮಗೆ ಬೀಳುವ ಕನಸುಗಳು. ಸುಪ್ತಮನಸ್ಸು ಜಾಗೃತಮನಸ್ಸನ್ನು ಡ್ರೈವ್ ಮಾಡುವುದು ಸಂಗತವಿರುವಂತೆಯೇ ಜಾಗೃತಮನಸ್ಸಿನ ವ್ಯಾಪ್ತಿಯ ವಿದ್ಯಮಾನಗಳು ಸುಪ್ತಮನಸ್ಸಿಗೆ ಇಂಧನ-ಸಂಸ್ಕಾರಗಳನ್ನ ಈಯುವುದು ಕೂಡಾ ಸಂಗತವೇ. ಹಾಗೆ ಸಂಸ್ಕಾರಿತರಾದ 'ಸುಪ್ತಮನಸ್ಸು' ಎನ್ನುವ alleged ನಾಟಕಕಾರರು ಸ್ವಪ್ನರಂಗಭೂಮಿಕೆಯಲ್ಲಿ ಅದ್ಭುತ ಕೃತಿಗಳನ್ನ ಆಡಿಸುತ್ತಿರುತ್ತಾರೆ. ಮೇಲ್ನೋಟಕ್ಕೆ ಅಸಂಗತ-ಅಸಂಬದ್ಧಗಳೇ ವಿಧಾನಪ್ರಧಾನವಾಗಿರುವಂತೆ ತೋರುವ ಇವುಗಳನ್ನ 'ಸ್ವಪ್ನಸಂಗತ'ವೆಂಬ ತರ್ಕ-ವಿಧಾನಾತ್ಮಕವಾಗಿಯೇ ಅರ್ಥೈಸೋಣವಾಗಬೇಕಾಗುತ್ತದೆ. ಬಹುವಾಗಿ ಎಚ್ಚರಾದ ನಿಮಿಷಗಳಲೇ ಮರೆವಿಗೀಡಾಗುವ ಈ ರಂಗಪ್ರಯೋಗಗಳ ಅಂಕಗಳನ್ನ ಆ ಕೂಡಲೇ ಮೆಲಕುಹಾಕುತ್ತ ಅನುಸಂಧಾನಿಸಿಕೊಳ್ಳಬೇಕಾಗುತ್ತದೆ. ಅಚಾನಕ್ಕನೆ ಎಚ್ಚರಾದಾಗ ಮರೆತುಹೋಗುವುದರೊಳಗಡೆಯೇ ಬರೆದು ಉಳಿಸಿಬಿಡೋಣವಂತ ಕೂತರೂ.. ಉದ್ಧ ಪೀಠಿಕೆಗಳ ಲಹರಿಯಲ್ಲಿ..  ಊಹೂಂ! ಸ್ವಪ್ನರಂಗದ ಲೇಟೆಸ್ಟ್ ನಾಟಕದ ಅದ್ಭುತಹೊಳಹುಗಳ ಲೇಟೆಸ್ಟ್ ಅಂಕಗಳು ಮರೆವಿನ ಪರದೆಯ ಮರೆಗೆ ಇನ್ನಿಲ್ಲದಂತೆ ಸರಿದೇ ಬಿಡುತ್ತವೆ.
*****

ಎಚ್ಚರಾಗೋದಕ್ಕೆ ಸ್ವಲ್ಪಮುಂಚೆ.. ಮನೆಯಲ್ಲಿ ತಟ್ಟೆಯಲ್ಲಿ ಅಮ್ಮ.. ಬಾಳೆಹಣ್ಣು ಪಾಯಸ ಬಡಿಸುತಿದ್ದಳು. ಏನೇನೋ ನೆನಪುಗಳು ಕಲಕಿ ಬಾಳೆಯ ತುದಿಯಲ್ಲಿ ದಕ್ಷಿಣೆಕಾಸುಗಳು ಪ್ರತ್ಯಕ್ಷವಾದವು. ಅಥವಾ ನಾನೇ ಅವುಗಳನ್ನ ಪ್ಯಾಂಟಿನ ಹಿಂದಿನ ಜೇಬಿನಿಂದ ತೆಗೆದಿಕ್ಕಿದೆ. "ಯಾವುದೋ ಪೂರ್ವಜನ್ಮದ ಧನ್ಯತೆಯ ಕ್ಷಣಗಳ ಋಣಭಾರದ ಸ್ಮರಣಿಕೆಗಳು ಇವು, ಅಮ್ಮ!" ಅಂತ ಏನೋ ಒಂದು ಅದ್ಭುತ ನಾಟಕೀಯ ಡೈಲಾಗು ಉದುರಿಸಿದೆ.


*****

ಅಲ್ಲಿನ ಸ್ಮರಣೆಯ ಪ್ರಕಾರ ಆ ದಕ್ಷಿಣೆ-ಕಾಸುಗಳ ಮೂಲದಲ್ಲಿ ಮನದುಂಬುವಂತೆ ಊಟವಿಕ್ಕಿದವರು ಪೂರ್ಣಿ-ಹರಿಣಿಯರು! ಎಷ್ಟು ಹಳೆಯ ಸ್ಮರಣೆ! ಇದು ಕನಸೊಂದರ ಚರಿತ್ರೆಯಾ? ಅಥವಾ ಜಾಗೃತಾವಸ್ತೆಯ ನನ್ನ ಚರಿತ್ರೆಯಲ್ಲಿನ ವಿದ್ಯಮಾನಗಳ ಸ್ವಪ್ನ ರೂಪಕವಾ?? "ಏನೋ ಒಂದು ತೊಟ್ಟು ಪ್ರೀತಿ ವಿಶ್ವಾಸಕ್ಕೆ ಹಂಬಲಿಸುವ ಹೈರಾಣು ಮನಕ್ಕೆ ಹಾಗೆ ನಿಜಕ್ಕೂ ಪ್ರೀತಿ-ವಿಶ್ವಾಸಗಳು ಸಿಕ್ಕಿದ ದಾಖಲೆ ನಿಜಚರಿತ್ರೆಯಲ್ಲಿದ್ದರೆ ಅದು ಅವರಲ್ಲಿ ಮಾತ್ರವಿರಬೇಕು" ಅಂಥ ಇದನ್ನು ವ್ಯಾಖ್ಯಾನಿಸಲಾ? ಈಗ ಜಾಗೃತನಾದವನು ನಿಜಚರಿತ್ರೆಯನ್ನ ತಡಕಾಡಿನೋಡಿದರೆ ಸರಿಯಾಗಿ ಅಂಥಾ ಯಾವ ಘಟನೆಯೂ ನೆನಪಿಗೆ ಸಿಲುಕುತ್ತಿಲ್ಲವಲ್ಲಾ? ಈ ದಕ್ಷಿಣೆಕಾಸುಗಳ ಮೂಲವೆಲ್ಲಿ ಹಾಗಾದರೆ? ಮತ್ತೆ ಇಲ್ಲಿ ಇನ್ನೊಂದು ಗಮ್ಮತ್ತೆಂದರೆ, ಪ್ರೀತಿ ವಿಶ್ವಾಸಗಳ ಕ್ಷೇತ್ರದ ಇತರ ಅಭ್ಯರ್ಥಿಗಳಾರೂ ಸ್ವಪ್ನಲೋಕದಲ್ಲಿ - ನೇರವಾಗಿ ಬರುವುದು ಬೇಡ - ಸಂಕೇತ/ಸೂಚ್ಯವಾಗಿಯೋ, ವಿಸ್ಮೃತಿಗೀಡಾಗುತ್ತಿರುವ ಸ್ಮರಣೆಯಾಗಿಯೋ, ಇಲ್ಲಾ ಕನಸಾಗಿಯಾದರೂ ಹೊಕ್ಕು ಬಳಸಾಡಿದ ಯಾವುದೇ "ದಾಖಲೆ" ಇಲ್ಲವಲ್ಲ!

*****

ಇದರ ಹಿಂದೆ ಇನ್ನೂ ಕೆಲವು ಅಂಕಗಳಿದ್ದವು. ಎಚ್ಚರಾಗುವ ವೇಳೆ ಒಟ್ಟಾರೆ ಅದ್ಭುತ ನಾಟಕವೊಂದಾದ ಸಂತೃಪ್ತಿಯಿತ್ತು. ಈಗ ನೆನಪಿಗೆ ಅಲ್ಪಸ್ವಲ್ಪ ಸಿಲುಕಿದ ಕೊನೆಯ ಅಂಕದಿಂದ ಕೆಲವು ಅಂಶಗಳು ಹೊಳೆದು ಕಾಣುತ್ತಿವೆ:
  • ಈ ಸ್ವಪ್ನರಂಗಪ್ರಯೋಗಗಳು ಕೆಲವೊಮ್ಮೆ ಏಕಪಾತ್ರಾಭಿನಯದ ಥರ. ಪ್ರತಿಯೊಂದು ಪಾತ್ರಗಳಲ್ಲಿ ನಾನೇ ಪರಕಾಯ ಪ್ರವೇಶಿಸಿದಂತಿರುವುದರ - ಪ್ರತೀ ಜೋಡಿ ಕಣ್ಣುಗಳ ಮುಖಾಂತರ ನಾನೇ ನೋಡುತ್ತಿರುವಂತಿರುವುದರ - ಜೊತೆಜೊತೆಗೆ ಎಲ್ಲರನ್ನೂ ಒಟ್ಟಂದದ ಮಟ್ಟದಲ್ಲಿ ನೋಡುವ ಅಸ್ಪಷ್ಟ ಇರುವಿಕೆಯ ಪ್ರೇಕ್ಷಕ ಸಾಕ್ಷಿಯೂ ನಾನೇ! ('ಇನ್ಸೆಪ್ಷನ್' ಪ್ರೇರಣೆ?)
  • ನನ್ನತನ ತುಸು ಹೆಚ್ಚಾಗೇ ಇರುವ ಪಾತ್ರಗಳಿಗೆ (ಅಂದರೆ ಯಾರಲ್ಲಿ ಬಹುವಾಗಿ ನನ್ನನ್ನು ನಾನೇ ಕಾಣುತ್ತೇನೋ ಆ ಪಾತ್ರಗಳು) ಅವುಗಳದ್ದೇ ಆದ ಸ್ವಪ್ನಚರಿತ್ರೆಗಳಿರುವುದು ('ಲೂಸಿಡ್ ಡ್ರೀಮಿಂಗ್'ನ ನೆರಳು?).., ಅಷ್ಟೇ ಏಕೆ, ಕನಸಿನೊಳಗೆ ಕನಸುಗಥೆ-ಕನಸುನಾಟಕಗಳು ಕೂಡಾ! ('ಲೂಸಿಯಾ' ಪ್ರಭಾವ?)

  • ಯಾವುದೂ ಸ್ವಯಂಭುವಲ್ಲ - ನಿರ್ವಾತದಲ್ಲಿ ಸೃಷ್ಟಿಕ್ರಿಯೆ ಜರುಗುವುದು ಸಾಧ್ಯವಿಲ್ಲ. ಪರ್ಯಾವರಣದ ಅಣು-ರೇಣು-ತೃಣ-ಕಾಷ್ಟಗಳೇ ರೂಪಾಂತರಗೊಳ್ಳುತ್ತ ಒಟ್ಟಂದವೆಂಬುದು ಹುಟ್ಟುಗಟ್ಟುವುದು. --ಇದು ಸುಪ್ತಮನದ ಸ್ವಪ್ನರಂಗಭೂಮಿಕೆಗೂ ಅನ್ವಯ. ಅಲ್ಲಿನ ಮೂಲಧಾತುಗಳು ಅಂತ ಭಾಸವಾಗುವವು ಕೂಡ ನಿಜಜೀವನದ ಸಧ್ಯದಿಂದ ಜಾತವಾಗಿರುವವು (ಹಾಗಿದ್ದಾಗಿಯೂ ಸಹ ಅಲ್ಲಿ ವಿಲಕ್ಷಣ ಸ್ಪಾಂಟೇನಿಟಿಗಳೇ ರಾರಾಜಿಸುವವು!). ನನ್ನಲ್ಲಿ ಬಂದು ಒಂದು ವಾರವಿದ್ದು ಹೋದ ಅಮ್ಮ, ಅರೆಹೊಟ್ಟೆಯಲ್ಲಿ ಮಲಗುವಾಗ ಕೊನೆಯಲ್ಲಿ ತಿಂದ ಬಾಳೆಹಣ್ಣು, ಪ್ಯಾಂಟಿನ ಹಿಂದಿನ ಜೇಬಿನಲ್ಲಿ ಹಾಗೇ ಉಳಿದು ಅಣೆಯುತ್ತಿದ್ದ ಚಿಲ್ಲರೆಕಾಸು ಮತ್ತು ವಯೋಸಹಜ ಹಂಬಲಗಳು! --ಇವೇ ತಾನೇ ಆ ಕೊನೇ ಅಂಕದ ಘಟಕಾಂಶಗಳು?!

    *****

    ಅಮ್ಮ ಆ ದಕ್ಷಿಣೆ ಕಾಸನ್ನ ತೆಗೆದು ಅಪ್ಪನ ಕ್ಯಾಷ್-ಡ್ರಾ ಗೋ ತನ್ನ ಡಬ್ಬಿಗೋ ಸೇರಿಸುತ್ತೀನಂದಳು. ಈ 'ವಿನಿಯೋಗ'ಕ್ಕೆ  'ಹೂಂ' ಅಂದೆ.

    --_--

ಸೋಮವಾರ, ಮಾರ್ಚ್ 3, 2014

ओ माझी रे.. / ಅಂಬಿಗನೇ.. / O majhi re..

ಅಂಬಿಗನೇ,
ಎನ್ನಯ ತೀರ
ನದಿಯ ಈ ಧಾರೆಯು

ದಡದಗುಂಟ ಹರಿಯುವವರೇ
ಎಲ್ಲೋ ಕೇಳಿದ್ದುಂಟಲ್ಲವೋ?
ಕಾಗದದ ದೋಣಿಗಳಿಗೆ
ಎಲ್ಲೂ ತೀರವಿರೋದಿಲ್ಲವು...
ಅಂಬಿಗನೇ,
ಯಾವೊಂದು ತೀರ
ವದು ತೀರ
ಕ್ಕೆ ಸೇರಿಬರುವುದೋ
ಅದು, ಎನ್ನಯ ತೀರವು..

ನೀರಿನೊಳಗೆ ಹರಿಯುತಿಹವು ಹಲವು ದಂಡೆ
ಒಡೆದಂಥವು;
ಬೀದಿಗಳಲಿ ಸಿಗುತಲಿಹವು ಸಕಲ ಆಸರೆ
ತಪ್ಪಿದಂಥವು
ಅಂಬಿಗನೇ,
ಆಸರೆಯೊಂದು ನಡುನೀರಲ್ಲಿ
ಸಿಗುವುದಾದರೆ ಅದು,
ಎನ್ನಯ ಆಸರೆಯು




ಮೂಲ :
ಗುಲ್ಜಾರ್ ವಿರಚಿತ,
ಖೂಬ್'ಸೂರತ್ (೧೯೭೫) ಚಲನಚಿತ್ರದಲ್ಲಿನ
"ಓ ಮಾಝಿ ರೇ.."   ಗೀತೆ :

O Maanjhi Re
Apna Kinara
Nadiya Ki Dhara Hai

Saahilon Pe Behenewale
Kabhi Suna To Hoga Kahi
Kagazon Ki Kashtiyon Ka
Kahi Kinara Hota Nahi
O Maanjhi Re
Koi Kinara
Jo Kinare Se Mile Woh
Apna Kinara Hai

Paniyon Mein Bah Rahe hain
Kayee Kinare
Toote Huye
Raaston Mein Mil Gaye Hain
Sabhi Saharein
Choote Huye
O Maanjhi Re
Koi Sahara
Majdhare Mein Mile toh
Apna Sahara Hai...

------------------------------------------------------------------------------------------------------------

ಇನ್ನೊಂದು ಪ್ರಯತ್ನ:

ಓ ಅಂಬಿಗನೇ,
ಎನ್ನಯಾ ದಡವು 
ನದಿಯ ಈ ಹರಿವು

ಪಾತ್ರಗಳಲಿ  ಹರಿಯುವವರೇ
ಎಲ್ಲೋ ಕೇಳಿದ್ದುಂಟಲ್ಲವೋ?
ಪತ್ರಗಳಾ ದೋಣಿಗಳಿಗೆ
ಎಲ್ಲೂ ಪಾರವಿರೋದಿಲ್ಲವು...
ಓ ಅಂಬಿಗನೇ,
ಯಾವೊಂದು ಪಾರ
ವದು ಪಾರದೀ
ಸೇರಿಬರುವುದೋ
ಅದು, ಎನ್ನಯಾ ಪಾರವು..

ಜಲಗಳಲ್ಲಿ ಗಮಿಸುತಿಹವು ದಂಡೆ ಹಲವು
ಛಿದ್ರಗೊಂಡು  ;
ಬೀದಿಗಳಲಿ ಕಲೆತುಹೋಗಿವೆ ಆಸರೆ ಸಕಲವೂ 
ಕಳಚಿಕೊಂಡು ;
ಓ ಅಂಬಿಗನೇ,
ಯಾವುದೊ ಒಂದಾಸರೆ ಮಧ್ಯಧಾರೆ
ಯಲಿ  ಸಿಕ್ಕರೆ
ಅದು, ಎನ್ನಯಾ ಆಸರೆಯು


ಗುರುವಾರ, ಫೆಬ್ರವರಿ 13, 2014

ಅನಂಗಚಿತ್ತದ ಅವಿರತ ಹೊಳಹು

ಅದು ಎಲ್ಲದು
ಅಳಿಸಿಸಿಕೊಂಡು ನಡೆ
ನಡೆದೂ ಉಳಿದುದರಿಂದ ಜೀವ
ನ ಮತ್ತೆ ಶುರುವೇ ಆಯಿತು
ಯಾವುದೋ ವಿವರದ ಉಳಿದರ್ಧ
ದಿಂದ ಶುರುವಾಗುವ ಈ ಟಿಪಿ
ಕಲ್ಲು ಕವನದ ಮುಕ್ತಾ
ಂತ ಸಾಲುಗಳು ಮುಂದುವರಿದಂತೆ ಹೊಸತು
ಸಂದರ್ಭಗಳಿಗೊಳಪಟ್ಟು ಒಟ್ಟಂದ
ದರ್ಥ ಗೂಡುತ್ತ ಗೂಢ ನಡೆಯಲಿ
ನಡೆವ ಬಗೆಯಲಿ 
ಯಾರನ್ನೋ ಇಳಿಸಿ ಬಿಟ್ಹೋಗಲು
ಎಂಬುದಾಗಿ
ಅಲ್ಲ, ಮತ್ತೆ ಹತ್ತಿಸಿ ಕೊಂಡ್ಹೋಗಲು ನಿಂದ ಕಾರು
ಹಿಂದಿಂದೇನೂ ತಿಳಿಯದಂತೋರ್ವನು ಬಂದು
ಏನಾದರೂ  ಸಹಾಯವಾಗಬಹುದೇ ಎಂದು ಇಹ
ದೊಳಗೆ ಕಳೆದ್ಹೋದುದರ ಪರ ಸುಳಿವನೀವಂತೆ
ಇಂದಿನೀಪುಟದೊಳು ನಿನ್ನೆಗೊಂಡಿಯನೊತ್ತಿದಾಗೆಂಬಂತೆ
ಯೂ ಅಲ್ಲವದು, ಭೂತದ ಹೊಳಹನಿಟ್ಟ ವರ್ತಮಾನ

        ****

ಮನಸ್ಸು ದೊಡ್ಡದು
ಮಾಡಿ ಕಡೆಗೂ ವ್ಯಾಲೆಂಟೈನು
ದಿನಾ ಅವಳಿಗಿಷ್ಟವೇ ಆಗುವ
ಪೆಂಡೆಂಟು ಉಡುಗೊರೆಯೆತ್ತಿ ಅವಳಂ
ಗಡಿಯಲಿ ಎದುರು ನಿಂದ
ರೂ ಗುರುತೇ ಇರದಂತೆ ಇದ್ದು ಬಿಟ್ಟಳು ರಂಡಿ
ಮಾರಾಯ ಅವಳು, ಮತ್ತೆ ಮತ್ತೇss
ರಿದಂತೆ ಮುತ್ತನಿನ್ಯಾರಿಗೋ ಈದೇ ಬಿಟ್ಟಳವಳಿಗದೇನಾಯ್ತಂ
ತದ್ದು ಸಹಿಸಲು ಸಾಧ್ಯವಿಲ್ಲದ್ದು
ಇದು ಇನ್ನು
ಡೈವೋರ್ಸು!

        ****

ನಿನ್ನಿಂದ ತೆಗೆಯದೇ
ನಿನ್ನ ನೀ
ಫೂಲು ಮಾಡಲಿಕ್ಕಾದೀತೆ?,
ತೆಗೆದು ಹಾಕುವ ಜಾಗವಿದ್ದು
ಹೋಗಿ ಅಳಿಸಿಸಿಕೊಂಡು ಬಂದಿದ್ದಾಳೆ
ಇದನೀಗನೀತನರಿಯುವುದೇ ಸರಿ
ಇಲ್ಲದೇ ಹೀಗೆ ಮುಂದೆ
ಹೋಗಲಾಗಲಿಕ್ಕಿಲ್ಲವಂತ...

(ಮುಂದುವರಿಯಬೇಕಿದೆ...)

------------------------------------------------------------------
ಇದು ಪ್ರತಿಸ್ಪಂದನ,
 "Eternal Sunshine of the Spotless Mind"  
ಎಂಬ  'ಅನೇರ ನಿರೂಪಣೆ 'ಯ ಸಿನೆಮಾಗೆ ...

ಶುಕ್ರವಾರ, ಜನವರಿ 31, 2014

ಇಜಾಝತ್ತು

ನನಗೋ
ದಿಗಿಲಿಕ್ಕಿಕೊಳ್ಳುತ್ತೆ
ದಶದಿಕ್ಕುಗಳಿಂದ ಕಾರ್
ಮುಗಿಲು ಢೀ ಹೊಡೆದು
ಮುತ್ತಿಕ್ಕುವಂತೆ ಎದೆ
ಬಿಚ್ಚಿ ಬಿರಿದು
ಕಿಲಕಿಲನೆ ಬಡಿಯುವಾ ಹೃದಯ
ಧಮನಿಗಳಲಿ ಧುಮ್ಮಿಕ್ಕುವ ನವ
ನವೋನ್ಮಾದದುಮ್ಮೇದಿಯ ನೆನೆ
ನೆನೆದಂತೆ ಹೀಗೆ
ನಡೆದು ಬಿಡುವುದೇ ಇದು
ನಡೆಯಬಾರದಿದ್ದಕ್ಕೆ  ತಡೆಯಿಲ್ಲವೇ..

    ***

ಮಾಯೆ!
ಎಂದೊಡನೆ ಕುಪ್ಪಳಿಸಿ
ಕಿರಿಚುತ್ತಾಳೆ ಉನ್ಮತ್ತ
ಕುಣಿಯುತ್ತಾಳೆ ಸ್ವಚ್ಛಂದ
ಬಿಗಿಯಲೆತ್ನಿಸುತ್ತೇನೆ ಹಿಡಿದು
ಸಡಿಲ ಜಾರುವ ಸ್ನಾಯುಗಳ
ದ್ವಂದ್ವಗಳಲಿ ಕಳವಳಿಸಿ
ಹೀಗೆ ಇದರೊಡನೆ ಏಗಿ
ಏಗಿ ನಡೆದಂತೆ ಕಾಲ
ತೇಗಿಯೂ ಬಿಡುವುದಾ ಹೇಗೆ?

    ***

ಈ ವಿಷಯೆ ನಶೆಯೇರಿದ ನಿಶೆ
ತಹತಹಿಸಿ ತಡಕಾಡುತ್ತೇನೆ
ಒಂದು ತೊಟ್ಟು
ಸುಧೆಗೆ,
ಸಿಕ್ಕೀತನ್ನುವದರಲ್ಲಿ ಶೀಶೆ
ಕೈಜಾರಿ ಉರುಳಿಬಿಡುತ್ತೆ
ಹಾ! ಮತ್ತೆ
ಸಿಕ್ಕಿ ಬಂದರೂ ಆಕಸ್ಮಿಕ
ಒಗ್ಗಿ ಬಂದರೂ ಸಹಜ
ಬಗ್ಗಿಸಿಕೊಂಡರೂ ಬೊಗಸೆಗೆ ತುಸು
ತುಸುವಾಗಿ ಸುಧೆ
ಸೋರಿ ಹೋಗುತ್ತೆ, ವಿವಶ,
ಇಜಾಝತ್ತ ಕಸಿಯುತ್ತ...

    ***

ಕಾಲದೊಡನೆ ದಾಪುಗಾ-
ಲೋಟದಿ ಸೋತು ಹೃದಯ
ನಿಂತೂ ಬಿಡುತ್ತೆ,
-ಹಾಗೊಮ್ಮೆ,
ತುಟಿಯಂಚಿನಲ್ಲಿ...

    ...__...

ರಾತ್ರಿಯೊಂದೂ ಮುಕ್ಕಾಲಿನ ಮಳೆ...

ಈ ಹೀಗೆ ಜಿಟಿಜಿಟಿ
ಜಡಿಯಲಿ ಮಳೆ
ಜಿಗುಟು
ಮಗುವಿನಳುನಗುಗಳಂದದಿ
ಮಾತು ಮೂಡದಂತ
ಭಾವಂಗಳ ಸೂಚಿಸುತ
ವಿಲಂಬಿತ ಧೃಪದ
ಬಂದಿಶೊಂದಾದಂತೆ
ರಾತ್ರಿಯೊಂದು
ಮುಕ್ಕಾಲು
ನನ್ನೊಳಿಳಿದಂತೆ
ಮಬ್ಬು
ನಿಷಾಧ ಹೊಡೆದಂತೆ
ಕಾವ್ಯ ಕಟ್ಟೋಣ
ಮಲ್ಹಾರ ವಿಸ್ತರಿಸಿ
ಹಾಡೋಣ...

(..ಮುಂದುವರಿಯಬೇಕಿದೆ...)

ಗುರುವಾರ, ಜನವರಿ 30, 2014

ಮಹಾಪ್ರಸ್ಥಾನ...

ಇಲ್ಲವಾದಾಗ
ಕಾಲು
ಎಳೆದುಕೊಂಡು ಹೊರಟ
ಉಸುಕಿನೂರಲ್ಲಂತೂ ಆ ಹೊಸ
ನಸು ನಸುಕಲ್ಲೂ  ಒಣ ಕನಸುಗಳ ಇತಿ ದಿಗ್ 
ದಿಗಂತವೇ ದಿಗಂತ ...
ಹಾ! ಮಳೆಯಿಲ್ಲ ಮೋಡಗಳ
ನೆರಳೇ ಇಲ್ಲ ಇದಕೆ
ಎಲ್ಲಿಯಂತವಂತ ಹುಡುಕಿ
ಕೊಳ್ಳೋಣವಂತ, ಕೊಲ್ಲೋಣವಂತ... 

                  ****

ನಿತ್ಯ ಹರಿದ್ವರ್ಣ ನೋಡಿ ನೋಡಿ
ನೋಡುವಲ್ಲಿ ದೃಷ್ಟಿ
ಪಾಳುಬಿದ್ದು  ಚಾಳೀಸಾಗಿ
ಯಾ ಬೋರಾಗಿ  ತಲೆಚಿಟ್ಹಿಡಿದ್ಹೋಗಿ
ಮರಳಿದ್ದಲ್ಲಿ ಬಿರುಬಿಸಿಲಲ್ಲಿ  ಬರಿ ಹುರುಳು
ಹುರಿದರಳಿಸುವುದೆಂದು
ಬಂದೆವು, ನಾವು  ಬಂದೇವು...

                  ****

ಯಾವೂರುಕೇರಿಯ ಯಾವಾರೆಯೋಣಿಯಲಿ
ಎಲ್ಲಿ ಶ್ವಾನವೊ, ನಮ್ಮದಿದೆಂತ ಮಹಾ
ಪ್ರಸ್ಥಾನವೊ...

ಗುರುವಾರ, ಏಪ್ರಿಲ್ 18, 2013

ಆಧುನಿಕ ಕವಿಕಾವ್ಯಕ್ಲೀಷೆಗಳು

ವರ್ಷಗಳುರುಳಿದಂತೆ ತಲೆ
ತಳೆಯದ ಖಾಚಿತ್ಯ ವರ್ತನೆ
ಯೊಳಾವರ್ತವರ್ತವರ್ತನಿಸಿ
ಬಂದು ಅನಾಮತ್ತು ಡಬ್ಬಲೊಂದು
ಡಬ್ಬಲು ಜೀರೋನೆತ್ತಿ ತಾನೇ
ತಾನಾಗಿ ಕ್ಲಾಸಿಕ್ಕು
ಹಾವಾಡಿಸುತ್ತ ಸುತ್ತ ಸುತ್ತಲೂ ಸಿಕ್ಕು
ಸಿಕ್ಕಾಗಿ ಕೂತಂತೆ ಕೆಲಸವಿಲ್ಲ ಕಾರ್ಯವಿಲ್ಲೆಂಬಂತೆ ಸಿಕ್ಕು
ಬಿಡಿಸೋ ವಿದ್ಯೆ ಜನ್ಮಜಾತದಂತಾಗಿ ಮೆದುಳಿಗೆ
ಸ್ಕ್ರೀನುಸೇವರಿನಂತೆ ಮೇಲ್ನೋಟಕ್ಕೆ
ಸಿಗದಂತೆ ಬ್ಯಾಗ್ರೌಂಡಲ್ಲಿ ಹರಿಯುತ್ತೆ ಅಖಂಡ
ಲಹರಿಯೊಂದು ಮತ್ತೆ ಮುಂದು
ವರಿಯುತ್ತೆ (ಹೀಗೆಯಾದರೆ ನಾ
ಫಿಜಿಕ್ಸು ಮಾಡೋದೆಂದಿಗೆ ಮತ್ತೆಯಂತ ಚಿಂತೆ ಬೇರೆ
ಯೆಳೆಯಲ್ಲಿ ಸಮಾಂತರ ಹರಿ ಹರಿಯುತ್ತ ಕ್ಷೀಣ
ಆದ್ಯತೆಗಳಲ್ಲಿ) ಹಾಳಾಗಲಿ ಈ ಒಂದು
ಲಯ ವಿನ್ಯಾಸ ಛಂದಗಳನ್ನೋದದೇಕೆ ಹಾಗೆ
ತಲೆ ಸೆಳೆಯುತ್ತದಂತ
ಸಿಂಟ್ಯಾಕ್ಟಿಕಲಿ ಭಂಗಿಸಿದರೂ ಶನಿಪಿಶಾಚಿ
ಯಂತೆ ಯಂತದ್ದೋ ಪ್ಯಾಟ್ಟರ್ನು ಪುನರಾವರ್ತ
ಸಿಮ್ಯಾಂಟೆಕ್ಕಿನ ಮಟ್ಟದಲಿ ಹಂಗಿಸುತ್ತೆ ಮತ್ತದೇ
ಧಾಟಿಯ ಸಾವಿರ ಕಾವ್ಯವೆಂದು ಬರೆಸುತ್ತೆ ಅಟೊಮೆಟಿಕಲಿ
ಕರಣ ಹಾವಾಡಿಸಲು ಪ್ರವೃತ್ತಿಸುತ್ತೆ ಹಾಗೆ
ಬರೆದಿದ್ದರ ವಿನ್ಯಾಸ ಮುಚ್ಚಿಹಾಕಲು ಅದೇ
ಹಳೇಯ ಬೌದ್ಧಿಕ ಕಸರತ್ತಿನ ಮಾರ್ಪಾಡುಗಳು ಮತ್ತೆ
ಇಷ್ಟಕ್ಕೂ, ಹೇ, ಆಧುನಿಕ
ಕಾವ್ಯವೆಂದರೇನು? ಗದ್ಯವೊಂದು ಕೂಡ ಕಾವ್ಯ
ವಂತನಿಸೋವಲ್ಲಿಗೆ, ಬರೆದ ಕವನಗಳು ವಾಚ್ಯ
ಗದ್ಯವೆನಿಸೋ ಹೊತ್ತಿಗೆ? ಬರೀತ ಮೂಲ
ಧಾತುಗಳ ಕರ್ಮಗಳ ಮೆರೆದು
ವಿಭಕ್ತಿ ಕರ್ತೃ ಎಲ್ಲ
ಮರೆದು ಸಮಾಸ ನಿಷ್ಪತ್ತಿ ಸಂಧಿ
ವಿಗ್ರಹಗಳ ಅಡ್ಡ
ಗೋಡೆ ಮೇಲಿಟ್ಟ ಉದ್ದೇಶಪೂರಿತ ಮಬ್ಬುತನಕ್ಕೆ
ಅಮೂರ್ತ ಬಹುಅರ್ಥಪೀಡಿತವಂತ ಸಂ
ಭ್ರಮಿಸಿ ತನಗೇ ಗೊತ್ತಿಲ್ಲದ ಪ್ರಶ್ನೆ
ಮೂಡಿದಂತಾಗುವಲ್ಲಿ ಬಾಲರ ಪ್ರತಿಭೆಯಲ್ಲಿ ಉತ್ತರ
ತರಿಸೋ ಭೂಪ, ಕಂತ್ರಿ, ಪ್ರಾಧ್ಯಾಪಕ-
ಬುದ್ಧಿ! ಶಡ್ಡೌನಾಗಬಾರದೇ ಸಡನ್ನಾಗಿ
ಕರೆಂಟು ಕಟ್ಟಾಗಿ...
....._____.....

ಸೋಮವಾರ, ಏಪ್ರಿಲ್ 8, 2013

ಎದುರುಬದರು

----------------------------------------------------------------------------
ಒಬ್ಬೊಬ್ಬರ ತಲೇಲೂ ಒಂದೊಂದು ಥಿಯರಿ ಇರುತ್ತೆ;
          ಈ ಜಗತ್ತಲ್ಲಿ ಅದಕ್ಕೆ ಪುರಾವೆ ಹುಡುಕ್ತಿರ್ತೀವಿ...

                                                       (ಚಿದಂಬರ ರಹಸ್ಯ)
----------------------------------------------------------------------------


ಗುರುಗಳೇ,

ಒಂದು ಅರೆಪಾರದರ್ಶಕ ನಿಲುವು-
ಗನ್ನಡಿಯ ಇಬ್ಬದಿಗಳಲ್ಲಿ
ಕೂತಿದ್ದೇವೆ ಇಬ್ಬರೂ
-ಎದುರುಬದರಾಗಿ ಒಬ್ಬರನಿನ್ನೊಬ್ಬರು

ಒಂದು ಬಿಂಬ, ಮತ್ತಿನ್ನೊಂದರ ಪ್ರತಿಬಿಂಬ
ಒಂದರಮೇಲಿನ್ನೊಂದು ಮಜವಾಗಿ ಬಿದ್ದು
ದ್ವಂದ್ವವೆಂಬವುಗಳ ಮಧ್ಯೆ ಹೀಗೆ
ಗೆರೆ ಮಾಸಲು, ತೆರೆ ಪೋರಸ್ಸು

ತೆಳ್ಳಗೆ ತುಸುವೇ ಪಾದರಸ ಬಳಿದ
ಗಾಜಾಗಿ ಅರ್ಧಂಬರ್ಧಗನ್ನಡಿ
ಅಸಾಧ್ಯ ಕುಚೋದ್ಯಗಾರನಾಗಿದೆ ಬಿಡಿ.

ಇತ್ತಲಾಗಿ
ಹದಿ ಈಗಷ್ಟೇ ಹರಿದಿದೆ
ಉಕ್ಕಿ ಬೀಳುತ್ತ ಬೆದೆ
ನಿದ್ದೆಯಲ್ಲೂ ಎವೆ ಬಿಟ್ಟಿವೆ
ಕನ್ನಡಿಯೆದುರು ತಂದು, ತೀಡಿ
ತಿದ್ದಿಕೊಳ್ಳುವ ತವಕ
ನನ್ನ ನೋಡಿಕೊಂಡಷ್ಟೇ ನಿಮ್ಮ ಕಡೆಯೂ;
ಬೆಡಗಿಗಷ್ಟೇ ಅಲ್ಲದೇ ಲಕ್ಷ್ಯ ಪೂರ್ಣತೆಯೆಡೆಯು.

ಅತ್ತಲಾಗಿ
ನೋಡುವಲ್ಲಿ ನನ್ನ ಪ್ರಸ್ತುತ
ವಾಗುತ್ತಿದೆಯಲ್ಲಿ ನಿಮ್ಮದೇ ಗತ
ನಿಂಭೂತೋ ನಂಭವಿಷ್ಯತ್ತಾ?

ಅಡ್ದಗೋಡೆಯ ಮೇಲೆ ದೀಪವಿಟ್ಟವರು
ಗಾಜ ಕಿಟಕಿಯಿಟ್ಟು ಕೆಳಗೆ ಬಿಂಬಕಾಣುವವರು
ಬಣ್ಣಬಣ್ಣದಿ ಪ್ರತಿ ಬಿಂಬಿಸ ಹೊರಟವರು
ಟೀಕೆಟಿಪ್ಪಣಿಸಿ ಅಡ್ವಯಿಸು ಬೀರಬೇಕಾದವರು
ವಿವರದರ್ಧದಲಿ ಭೂತ ಭಾಧೆಯಾದಂತೆ
ತಡವುತ್ತೀರಿ ತಲೆ ಕೊಡವುತ್ತೀರಿ.

ಕಣ್ತುಂಬ ತುಂಬಿಕೊಂಡು ಬಾಯ್ತುಂಬ ಬೈವವರು
ಒಂದು ನಿರೀಕ್ಷಣಾಜಾಮೀನಿಗೆಂಬಂತೆ ಹೀಗೆ ತಾವನುಸರಿಸುವ
ಸ್ವನಿರಾಕರಣೆಯಲ್ಲಿ ಮಾತ್ರ ನೋಡಿ ನನಗೆ
ಕಂಡು ಬಿಟ್ಟಂತಾಯ್ತು ಥೇಟು ನನ್ನದೇ ಪ್ರತಿಬಿಂಬ!

ಶನಿವಾರ, ಮಾರ್ಚ್ 30, 2013

ಶೇಕ್ಸಪಿಯರೀಯ ಹುಳಿನರಿಯು

ಈಸ್ಟೂ ಬೂಸ್ಟೂ
ಅಥವಾ
ಶೇಕ್ಸಪಿಯರೀಯ  ಹುಳಿನರಿಯು



ಒಂದು ರಾತ್ರಿಯೆನ್ನ  ರೂಮೊಳಗೆಯೇ 
ಕೆಲಸದ ಚಾಪೆಯ ಮೇಲೆ ಹಾರಿಯೂ ಸಿಗದ 
ದ್ರಾಕ್ಷಿ ಹುಳಿಯೆಂದು ಹೊರಟ ನರಿ ಸಿಕ್ಕಿತು
ಅಚಾನಕ್ಕನೆಯಾಗಿಯೆಂಬಂತೆ 

ಅಲ್ಲಾ, ಈಗ ಹುಳಿಯೆಂದದ್ದು ಯಾರಿಗೆ ಕೇಳಿಸಲಂತ ?
-ಅಂತ ಕೇಳಿಕೊಂಡಂತೆ ನರಿ ಸಿಲುಕಿಕೊಂಡಂತಾಯಿತು. 

ಸ್ವಗತವೇ ಇರಲಿಕ್ಕೆ ಬೇಕು : 
ಶೇಕ್ಸಪಿಯರನ ಎಳೆ ತಂದೊಮ್ಮೆ ಕೇಳಬೇಕು... 

ನರಿ ಅಂತಂದರೇನು ಸುಮ್ಮನೆಯೇ ನರಿಯಾಯಿತೇ?
ನಡೆನುಡಿಯೆಲ್ಲ ಹುಳಿಹುಳಿಯಷ್ಟೇ ಅಲ್ಲ,
ತನುಮನವೆಲ್ಲವೂ ಸಹಾ  ಹುಣಸೇ ಹಣ್ಣುಹಣ್ಣಾಗಿ ನರೆತು
ಒಳಹೊರಗುಗಳು ಹೀಗೆ ಬೆರೆತು ಬಂದಿರಬೇಕು. 

ಈಗ, ನಿತ್ಯದಂತೆ ಹೊರಟಾಗ ದ್ರಾಕ್ಷಿ ಕಂಡಿರಬೇಕು,
ನೇರ ನಿಲುಕಿಗೆ ಸಿಗದಂತೆ ತುಸು ಎತ್ತರದಲ್ಲಿ ,
ಗೊಂಚಲು ಗೊಂಚಲಾಗಿ... 
ಹಾರಿ ಅಡ್ಜಸ್ಟು ಮಾಡಬಹುದೇನೊ..,
"ಏಕೆ ಮಾಡಬೇಕು??"
-ಅನ್ನೋದನ್ನ ಮೊದಲು ಕೇಳಬೇಕು.

"ಹಾರಿ ಕಿತ್ತು ಚಪ್ಪರಿಸೋದು ರಮ್ಯ"
ಕವಿಯಾಗಿ ನೋಡಿದರೆ, ಮೇಲಾಗಿ,
ಫ್ರಕ್ಟೋಸು ಪೋಷಕಾಂಶಗಳಿರುವಲ್ಲಿಗೆ ಒಂದು 
ಹೊತ್ತಿಗಾಗುತ್ತೆಯಾಗಿ ಈ "ದ್ರಾಕ್ಷ 
ರಸಕ್ಕೆ ಜಿಗಿದು ಜಂಪಿಸಿ 
ಟ್ರೈ  ಮಾಡೋದು ಬಡನರಿಯಾಜನ್ಮಸಿದ್ಧ ಹಕ್ಕು!"
- ನೆಹರೂ-ಸಮಾಜವಾದದರಸುತ್ತಿಗೆ ಹಾಗಂದಿರೋದು.

ಹಾಗೆ ಸಂಕಲ್ಪಮಹಾತ್ಮ್ಯವ ವಿವರಿಸಿ  
ಹಾರುವುದು,
ಹಾರಿ ಹಾರಿ ಬಿದ್ದು ಬಿದ್ದೂ  ಸಿಗದಿದ್ದರೆ 
ದೂರುವುದು:

"ಹಾರಿ ಬಿದ್ದೂ ದೊರಕದ್ದು 
ಹುಳಿಯಿದ್ದಿರಲಿಕ್ಕೇ  ಬೇಕು;
ನಮ್ಮೊಳ್ಳೆಯದಕ್ಕಾಗಿಯೇ ಹಾಗೊಂದು 
ಮ್ಯಾಚು ಮುಂಚೆಯೇ ಫಿಕ್ಸಾಗಿರಬೇಕು."

-ದೂರಲೇ ಬೇಕು ಕೃತಿ  ಸೋತಂತೆ
ಕಾಣುವೆಡೆಯೆಲ್ಲಾ ಇನ್ಯಾವುದೋ ಅಪರ
ವನ್ನಾರೋಪಿಸಬೇಕು ಮಹಾನ್ ಸನಾತನಿಯಂತೆ
ಪ್ರಲಾಪಿಸಬೇಕು ಸಕಲಾನಿಷ್ಟಕಾರಕ ಶನಿಯೆಂದೆಂಬ
ಪ್ರಕಲ್ಪವ, ಯಾರು ಕೇಳದಿದ್ದರೂ 
ತನಗೆ ಕೇಳಿಸುವಂತೆ. 

ನರಿಯೆಂಬುದು ಹಾಗೆ ಈಸ್ಟು 
ಬೆರೆತುಬಂದು ಹುದುಗಿದ
ಹುಳಿಹುಳಿಯಾದ ಹಿಟ್ಟನ್ನು 
ಬೂಸ್ಟು  ಬೆಳೆಯೋದಕ್ಕೆ ಮುನ್ನವೇ ತೆಗೆದು 
ಪದರು ಪದರಾಗಿ ಬೇಕಿಸಿದ 
ಲೇಯರ್ಡು  ಕೇಕು. 

ಭಾನುವಾರ, ಡಿಸೆಂಬರ್ 30, 2012

ಕೃತಿ ಸೋಲುತ್ತ ಭಾರತ

ನೀವು ಹೇಗೂ ನಗುತ್ತಲೇ ಇರುತ್ತೀರಿ
ಉಕ್ಕಿಬರುವಂತಾಗಿದೆ ನಮಗೂ ಈಗೀಗ
ನಕ್ಕೂ ಬಿಡಬೇಕೇನೋ ಬಹುಶಃ
ಅದೃಷ್ಟವಶಾತ್
-ಹಿಂದೆ ದುರ್ ಪ್ರತ್ಯಯ
ಬೀಳುವಂತಾಗಿದೆ ಬಹುಶಃ

ಚಿಗುರು ಹೊತ್ತಲ್ಲೇ ಬಂದು ತಲೆತಿಂದತ್ಯಂತಿಕ ತಾತ್ವಿಕ
ಅಪರಿಹಾರ್ಯಗಳ ನಿಭಾಯಿಸಲಾರದೇ ಹೋದ ಸೋಲುಗಳ ಭಾರ
ತಾ ತಾಳಲಾರದೆ ಕುಸಿದಂತೆ ಕೃತಿ ಸೋಲುತ್ತ
ತನ್ನೊಳಗೆಯೇ ಭಾರತ

ನಗುವಿರೇಕಯ್ಯ,
ಮಣ್ಣಾಗುವ ಮುಂಚೆಯೇ
ಮೀಸೆಬೋಳರು ನಾವು
-ಪೂರ್ವಾನ್ವಯ
-ಕತ್ತರಿಸಿ ಜುಟ್ಟು ಜನಿವಾರ ಕಿತ್ತೆಸೆದಿರುತ್ತೇವೆ
ನಾವಿಕ-ನೌಕೆ-ನಕಾಶೆಯೆಲ್ಲ ಸಂಶಯಿಸಿ ಬರಿ
ಈಜಿಯಾತೀರ ಸೇರಿ ತೀರುತ್ತೇವೆಂದು ಇಂದಲ್ಲ ನಾಳೆ
ಇತ್ತಣ ದಂಡೆಯಲೇ ಸಾಯ ಹೊಡೆದಿದ್ದೇವೆ ಹೀಗೆ ಸಾಮದಂಡ
ಮತ್ತು ನಮ್ಮ ಚಿತ್ತಾಗಸದ ವರ್ತಮಾನದಲಿದ್ದದ್ದೇ ಈ
ಉಪಬ್ರಹ್ಮಣ ಉಡ್ಡಯನೋಲ್ಲಂಘನೇತ್ಯಾದಿ ವಿದ್ಯಮಾನ
ವೆನ್ನುವಲ್ಲಿಗೆಯಡ್ಡಡ್ಡ ಉದ್ಧಂಡ
ಬೀಳುವವರೇ ನೀವು ಭಳಿರೇ ! 


ಕುಶಲ ಕಥನಕಾರರು ನಾವು  
ಕತ್ತೆಯುಚ್ಚೆಹೊಯ್ಯುವಂದದಲಿ  ನಮ್ಮದೇ ಕಥನದಲಿ ಸೋಲುತ್ತ
ಭವ್ಯಪರಾಜಯವೆಂದು ಬಣ್ಣಿಸುವ ಸ್ವವಿಮರ್ಶಕರೂ ಕೂಡ,
ಹಾಗೆ ಸೋಲೋಪ್ಪುವರಲ್ಲ ನಾ
-ವೆನ್ನುವಲ್ಲಿಗಿನ್ನೇನಂತೆ ಬಂದುಬಿಡಿ ನಮ್ಮ ಹಿಂದುಹಿಂದಕ್ಕೆ
ಉಘೇ ಉಘೇ ಎಂದೆಂದುಗಿಯುತ್ತ...




-----------------------------------------------------------
ಸಾವಯವ ಸವ್ದು ಸಾಯ್ಲಿ , ಶಿಲ್ಪ ಎಲ್ಲಿದ್ದಾಳ್ರೀ ..!

ಬುಧವಾರ, ಅಕ್ಟೋಬರ್ 31, 2012

ನಾಸ್ಟಾಲ್ಜಿಯಾ



ಅವಳ
ನನ್ನವಳಾಗಿಸಲಾಗದ
ಸತ್ ಯಾ ದುರುದ್ದೇಶಗಳ
ನಿರುದ್ದಿಶ ಸರಾಸರಿ
ಮೇಲ್ತೆಗೆದು
ನನ್ನ ತುಂಡರಿಸಿದ
ಸಾಲ್ಗಳ
-ಅವಳು ತಾಕುವ ಸ್ವರಗಳ
ಮಧ್ಯೆ ಹುಗಿದರೂ ಅನಾಹತ್ತಾಗಿ
ಭ್ರೂ ಕಂಪಿಸಿ ಅನಾಮತ್ತಾಗಿ
ಬಿರಿದೆದೆ ಸೀಳಿ ಕುದಿಯಾಳದಿಂ
-ದೆದ್ದು ಸ್ಪುರಿಸುತ್ತಾಳೆಂಬುದು
ಸರಾಸರಿಗಳಿಗೊಗ್ಗದಾಚೆಯ ಬದುಕಿನ
ಯಾದೃಚ್ಛಿಕ ನಡೆಗಳಾಕೆಯ
ಭಯಂಕರ ಕಟುಮಧುರ
ನಾಸ್ಟಾಲ್ಜಿಯಾ




------------------------------------------------------------------------------------------------------------------



...ನನ್ನವಳಾಗಲಿಲ್ಲ,
--ಅಥವಾ ನನ್ನವಳಾಗಿಸಲಾಗಲಿಲ್ಲ.
--ನನ್ನ ಕೈಲೂ .., ಮತ್ತೆ ಅವಳ ಕೈಲೂ ಸಹಾ.
ಯಾಕೆ ಈ ವೈಫಲ್ಯ?? --ಅಂತ ಕೇಳೋಕೆ ಹೊರಟರೆ, "ನಿಜಕ್ಕೂ ವೈಫಲ್ಯವೇಯಾ?" ಅಂತಾಗಿ...
ಯಾಕೆಂದರೆ -- ಒಳ್ಳೆಯದೋ ಕೆಟ್ಟದ್ದೋ -- ಆಗಿಸೋ ದಿಶೆಯಲ್ಲಿ ಒಂದು ಉದ್ದೇಶ ಅಂತ ಏನಾದರೂ ನಿಜಕ್ಕೂ ಇತ್ತಾ?
--ಅನ್ನೋದೂ ಸಹಾ ಸ್ಪಷ್ಟವಾಗದ ನಿರುದ್ದಿಶದಲ್ಲಿ ಸಮಾಧಾನಪಡೋಣವಾಗ್ತದೆ..

--ಸಮಾಧಾನವಾಗ್ಲೀಂತ ಹೊರದಾರಿಯಾಗಿ
ಕಾವ್ಯದ ಕಡೆ ಹೊರಳುವಲ್ಲಿ -- ಹೊರಳಿದಲ್ಲಿ
--ಹಿಮ್ಮರಳಿ ನೋಡುವಲ್ಲಿ, ಈಗ್ಲೂ.., ಅಂದಿಂದಿನ ನನ್ನ ಕಾವ್ಯಗಳಲ್ಲೂ ಅವಳ ಗಾಯಕಿಯಲ್ಲೂ ಅವ್ಯಕ್ತ ಅಸ್ಪಷ್ಟ ನಾಸ್ಟಾಲ್ಜಿಯಾ...

ನಿಜವೇನೋ.., ಒಬ್ಬ ಸೃಷ್ಟಿಶೀಲ ಮನುಷ್ಯ.., ಆತನಿಗೆ ಒಂದಿಷ್ಟು ಅನುಭವವಾದಮೇಲೆ, ಒಂದಿಷ್ಟು ಪ್ರಬುದ್ಧತೆ ಬಂದಮೇಲೆ, ಅವನ ಸಂಗೀತ-ಸಾಹಿತ್ಯೇತ್ಯಾದಿ 'ಕಲೆ'ಗಳಿಗೆ ಈ ವ್ಯಕ್ತಿಗತ ಹಿನ್ನೆಲೆಯಿಟ್ಟೂ ನೋಡ್ಬೇಕಾಗ್ತದೆ...
--ಅಷ್ಟರ ಮಟ್ಟಿನ ವ್ಯಕ್ತಿನಿಷ್ಟತೆ ಈ'ಅಸ್ಪಷ್ಟಸೃಷ್ಟಿ'ಗಳಲ್ಲಿ ...

ಬಿ
ಡಿ
ಬಿ ಡಿ
ಬಿಡಿ ಬಿಡಿ
ಬಿಡಿ ಬಿ 
ಡಿ ಬಿಡಿ..ಸಿಕೊಂಬಾರದೇ!

--ಬಿಡಿಸಿಕೊಂಡೂ ಬರೀಬೇಕು,
--ಬಿಡಿಸಿಕೊಂಡೇ ಓದ್ಬೇಕು.
--ಬಿಡಿಸಿಕೊಂಡೂ ಹಾಡ್ಬೇಕು,
--ಬಿಡಿಸಿಯೇ ಕೇಳ್ಬೇಕು...



------------------------------------------------------
ಹಿಂನೆಲೆವೀಡುಗಳು:  ಯಾದೃಚ್ಛಿಕ-ನಡೆ/random-walk, ಸರಾಸರಿಗಳಿಗೊಗ್ಗದ/non-(self-)averaging ,
ಅನಾಹತ: ಸಂಗೀತದಲ್ಲಿ ಸ್ವರ-ಸ್ವರಗಳ ನಡುವಿನ ಮೌನ; ಮೂಲವಿಲ್ಲದ/ಅನಾದಿ ನಾದ; ಹೊಡೆತಗಳಿಂದ ಉತ್ಪತ್ತಿಯಾಗುವಂತಹದ್ದಲ್ಲದ ನಾದ;  non-mechanical/un-plucked/non-percussion/primordial/phantom-sound...

ಬುಧವಾರ, ಅಕ್ಟೋಬರ್ 3, 2012

ಕೇಂದ್ರದಾಚೆ / (ವ್ಯಕ್ತ)ಮಧ್ಯೆ / d-focussd ^


ಆಕೆಯಿದ್ದಳು

ತನ್ನದಲ್ಲದ ಸಿನೇಮಾದಲ್ಲಿ
ಎರಡನೇ ಯಾ ಮೂರನೇ
ನಾಯಿಕೆಯಂತೆ
ತಾನೇ ತಾನಾಗಿ
ತನ್ನದಾಗದ ಕಥೆಯಂಚು
ಅಂಚಿಗೆ ಇಂಚಿಂಚು ಸಿಕ್ಕೂ
ಸಿಗದ ಆಮುಂಚಿನ
ಕಥನಕ್ರಮದ ನಾಯಕನ
ಕಾದುನಿಂದ ಶಬರಿಯಾಗಿ
ಬರಿಯಾಗಿ
ನಿವಾಳಿಸಲಂತೂ ಆಗದ
ದೃಷ್ಟಿ ಯಾಗಿ
ಬೆಳಸಲೂ ಆಗದ ಕರ್ತೃವಿನ
ಅಸಹಾಯಕತಾ ನಿರೂಪವಾಗಿ
ಇನ್ನೂ  ಏನೇನೋ ಆದರೂ ತಾನು
ಮಾತ್ರಾ ಆಗದಾಕೆಯಂತೆ...

ಇಂತಿಪ್ಪಾಕೆಯ ಚಿತ್ರದಲ್ಲಿ ಚಲನೆ
ತರುವುದಾದರದು ಆನಂದ
ವರ್ಧನನ ಕಾವ್ಯಮೀಮಾಂಸಾ ಪ್ರಕಾರ ಅಸಂಭವ
ದೋಷವಾದೀತಾದರೂ ತರೋಣವೆಂಬ
ಹುಕಿಗೆ ನವೋದಯವಾಗಿ ಅಸಂಗತ
ಅತಿವಾಸ್ತವ ವಿಪರೀತಗಳಾಗಿ ನವ್ಯ
ಬಂಡಾಯಗಳಾದವು.

(ನವ್ಯೋತ್ತರವಾಗಿ ಹೊರಳಿ)
ಈ ರಾಮಾಯಣ ಮುಗಿದಂತಾದರೂ ಪಾತ್ರ ಮುಗಿಯದೇ
ಮಹಾಭಾರತವಾಗಿ ಕೃಷ್ಣನ ಸತ್ಯ ಭಾಮೆಯಾಗಿ
ಸಿನೇಮಾದ ಹೊಸ ಪಾರ್ಟಲ್ಲಿ ಇವಳ ಬೆಳೆಸಲೆತ್ನಿಸಿದುದು
ಹಳೆಯದಾದರೂ ಬೇರೆಯದೇ ಕಥೆಯಾಯಿತು.

ಅದೇನೇ ಇರಲಿ,
ಸಾಮಾನ್ಯದಲ್ಲಿ ನೇರ ಅಭಿ
ವ್ಯಕ್ತಿಯಾದ ಮೇಲಿಂದ
ಮೇಲೆ ನೋಡಲೊಮ್ಮೊಮ್ಮೆ
ವ್ಯಕ್ತ ಸಾಲುಗಳ ಮಧ್ಯೆ ಉಳಿದು
ಬಿಟ್ಟು ಹೋದಂತೆ ಏನೋ
ಕಂಡದ್ದರಾಚೆ ತುಸುದೂರ ದಿಗಂತದಲ್ಲೆಂಬಂತೆ
ಫೋಕಸ್ಸಿನತ್ತಿತ್ತ ಮಬ್ಬು ಮಬ್ಬಾಗಿ
ಆಗ್ಗಾಗ್ಗೆ ಅವಳು ಸುಳಿದಂತಾಗುವುದುಂಟು.

ದೇಹದಲ್ಲಿಯಾತ್ಮವೆಂಬಂತೆ ಕಾವ್ಯಸಂದೇಹ ಸಮಸ್ಯಾತ್ಮಕಳು
ಆರೋಪಸ್ವರೂಪಳು, ಅವಳಿದ್ದಳು.


------------------------------------------------------------------------
(ವಿಸೂಚ್ಯೋಚನೆಯಾಗಿ :
ತುದಿಮೊದಲುಗಳಲಿ ಅವಳಾಗಿದ್ದರೂ
ಮಧ್ಯದಲ್ಲಿ ವ್ಯಕ್ತವಾಗುವ ಪರಿಯಲ್ಲಿ
ಇವಳಾದವಳನ್ನ ಇನ್ನು ತಿದ್ದದೇ
ಕೈಬಿಡುವುದುಚಿತಂ?)


-------------------------------------------------------------------------
^ಹಿಂನೆಲೆಗಳು :
Look beyond what you see,
Read between the lines,
ಮೂರ್ತ ಮೂರುತಿಗಳ ನಡುವಣ ಅಮೂರ್ತಗಳು,
ವ್ಯಕ್ತವ್ಯಕ್ತಗಳ ನಿಶಿದ್ಧ ಸಂದಿಯಲವ್ಯಕ್ತವಾದವು,
ಆಗಾಗುತ್ತ ನಡೆದ ಸಾಲುಗಳ ನಡುವೆ ಆಗದೇ ಉಳಿದು
ಬಿಟ್ಟ ಮತ್ತಿತ್ತ್ಯಾದಿಗಳು...

"मेरे गीतों में, तुझे ढूंढें जग सारा..! "
 
"...ಅರ್ಥದ ಸುತ್ತ ವ್ಯರ್ಥ ಪದಗಳ ವಿಪರೀತಾಲಂಕಾರ!" (ಮಮತಾ ಜಿ ಸಾಗರ?)
--------------------------------------------------------------------------

ಮಂಗಳವಾರ, ಜನವರಿ 31, 2012

ನಿರ್ಮಿತಿ

ಇನ್ನೂ ಕಟ್ಟಲಾಗುತ್ತಿದೆ...

    ******

 
ಇಟ್ಟಿಗೆಮೇಲಿಟ್ಟಿಗೆಯಿಟ್ಟುಕಟ್ಟಿದೆ
ನಾ ನಿನಗರ್ಥವಾಗೋಲ್ಲ ಬಿಡು ಇದು
ನಡೆಯುತ್ತಿದೆ! ಇದೋ ನಡೆಯುತ್ತಿದೆ, ಇದೂ
ನಡೆಯುತ್ತಿದೆ...
ಆನಂದಾನುಭೂತಿಯದ್ಭುತಕ್ಷಣಾಮೃತಂ!

    ******


ಅನಂತ ಮೆಟ್ಟಿಲುಗಳ ಅನಂತ ಕಂಬಗಳು...
ಕನಸಿನೊಂದು ಹಾದಿ ಹಿಡಿಯುತ್ತ..
ಹಿಡಿದ ಹಾದಿ ಕನಸ ಬದಲಿಸುತ್ತ..
ಒಂದನರ್ಧ ಏರಿ ಇನ್ನೊಂದಕ್ಕೆ ಹಾರಿ,
ಅದರಲೊಂದಿಷ್ಟು ಏರಿ ಮಗದೊಂದಕ್ಕೆ ಹಾರಿ..
ಕನಸು ಹಾದಿ ಬದಲಾಯಿಸುತ್ತ...
ಒಂದು ಏಣಿ ಮತ್ತೊಂದಕ್ಕೆ ದಾರಿ...
ಸುತ್ತಿ ಸುತ್ತಿ ಸುತ್ತಿನೇಣಿಯ ಹತ್ತುತ್ತ...
ಅರ್ಥವೂ ಆಗಲಿಕ್ಕಿಲ್ಲ ಮರಿ,
ಏಣಿಯಾಗಿದ್ದಲ್ಲ, -ಮುಂದೆ ಆಕಾಶಗುರಿ.

    ******


ಏನದು? ಪ್ರೇಮ? ಪ್ರೀತಿ? ಗೊತ್ತಿಲ್ಲ..
ಮಾಡದೇ, ಮಾಡಿದ್ದ ತಿರುಗಿ ನೋಡದೇ,
ತಿರುಗಿ ಮಾಡದೇ, ಮಾಡಿ ತಿರುಗದೇ,
ತಿರುಗುತ್ತ ನೋಡುತ್ತ ಮಾಡುತ್ತ  ಮಾಗುತ್ತ
ನಡೆಯದೇ ಗೊತ್ತಾಗಲಿಕ್ಕೂ ಇಲ್ಲ ಬಿಡು

ಹುಸಿಮಾತು, ತುಸುಮುನಿಸು,
ಅಷ್ಟಿಷ್ಟು ಕುತೂಹಲ ಮತ್ತೆ ಬೆಸೆದೀತು...
ಕೊರಗು ಮರುಗು ಅಗಲು ಅಲುಗು ತುದಿ
ತಿರುಗಿ ಬೆರಗು! ಏನು ಪ್ರೀತಿ ಆಹಾ!
ಗೊತ್ತಾಗುತಿದೆಯಾ..
ಇರಬಹುದು.. ಇರಲೂಬಹುದು.. 
ಯದ್ಭಾವಂ ತದ್ಭವತಿ ಪ್ರೀತಿ :)

    ******


ಏನದು ಏನೇನದು ಏನೋ 
ಅದು ಇದನು ನಡೆಸುತ್ತಿರುವುದು
ಏನಕೋ, ಗೊತ್ತು ಮಾಡದೇ
ನಡೆದಿದ್ದು ಅಂದು, ಗೊತ್ತಲ್ಲವೇ ಅಂತೂ
ನಿತ್ತೀತು ಇಂದು, ಅಂತೇ, ಗೊತ್ತಾಗದೇ..
ಆಕಸ್ಮಿಕಫಲವು - ಆಕಸ್ಮಿಕವಾಗಿ ವಿಫಲವೂ...

    ******


ಹೇಳಿಬಾರದೆಂದೂ ಅಮೃತಕ್ಷಣ
ಅಲ್ಪವೇ ಸಾಕ್ಷಾತ್ಕಾರ ಕ್ಷಣ
ಕವಿತೆಯೊಂದು ಕಣ
ದೊಂದಿಗೊಂದು ಕ್ಷಣ ಅನುಸಂಧಾನ
ಆತ್ಮಾನುಸಂಧಾನ ಜೀವನಾನುಸಂಧಾನ
ಸಂಭವವಾನುಭವಿಸು ಬರಿ
ಹೋಗೆನ್ನದಿರಲೋ ರಂಗ...
      .

---ಅಂದತ್ತ...

ಅರ್ಥಕ್ಕೊಗ್ಗದ ಪದಗಳ ಮಗ್ಗಲು ಮುರಿ
ಬಗ್ಗಿಸಿ ಬಳುಕಿಸಿ ಮಲಗಿಸಿಯೂ
ದಕ್ಕದ್ದು ಕಾವ್ಯವೆಂದತ್ತ ಹೊರಟ
ದಿಕ್ಕೂ ದಕ್ಕದಾ ಮೇಲದು
ದತ್ತವಾಗಿರಬೇಕಂದಲ್ಲವೇ
ಎಂದದ್ದು ಎಂದರೆ ಅಲ್ಲದ್ದು
ಅಲ್ಲದ್ದೂ ಎಂದರೆ ಅಲ್ಲದು
ಎಲ್ಲದು ಎಲ್ಲದು ಎಂದೆಂದು
ನಾ ಕೇಳಿ ನಾನಾ ನನನ
ನನನನ ನುಡಿದಂದತ್ತನಾದ
ಬರಿಶಬ್ಧವಲ್ಲೆಂದು ಹಿಂದತ್ತ
ಬೆಡಗೀಲೆ ಬಂದಿತ್ತ ಬೆರಗು!


-| ೩೦-೦೧-೧೨ | ೦೫:೦೫ | ಪ್ರಾತ: |-

ಸಖಿಹೀನ

ಇತಿ ಶ್ವೇತಪತ್ರ, ಇತ್ಯನರ್ಥ
ಸಖಿ, ಶ್ವೇತ, ಈತನಪಾತ್ರ 
ಸಸ್ನೇಹಕೂ ಸಹ
ಜೀವನಕು...

ಸಂಬಂಧ-ವಿಬಂಧಗಳೀಗೀಗ
ಎನಗರ್ಥ ಸಖಿ
ಹೀನವಾಗಿಹವು ಬಂಧ..,
ಮಗದೊಮ್ಮೆ ಎನಗರ್ಥ ಸಖಿ
ರಾಹಿತ್ಯದಿ ಅಂತಿಮಾರ್ಥ!

ಹಿಂದಿನದುಕೆನ್ನ ಬೆನ್ನಾ
ವರ್ತನಾ ದೋಷ ಕಾರಣ ಏನೋ
ತಪ್ಪ ಸರಿಪಡಿಸಲಿನ್ನೊಮ್ಮೆ
ಸಖಿ ತಪ್ಪಲೇನು..?

ಉತ್ತರದಾಯಿತ್ವವೆಲ್ಲಿ
ಬಿತ್ತರಾಗಸದಲ್ಲಿ ಬರಿ ಈ
ಪರಿ+ಪ್ರಶ್ನಗಳಾ ಸಖಿ
ಉತ್ತರೋತ್ತರದಲ್ಲಿ...

ಬೆಳ್ಳಿಯಂಚಿನ ಸಂಜೆ
ಗೆಂದಾಗಸಕೆಂದು ಸಖಿ
ರಸವೆಲ್ಲಿಂದ ಸ್ಪುರಿಯಿಸಲಿ
ಬಾಳ+ಆ+ಕಸದಲ್ಲಿ..


ಮಿಥ್ಯಾಸ್ವಯಂಭುಸೃಷ್ಟಿ

ಸತ್ಯಾ - ಮಿಥ್ಯ,
ಸಂಭವಾಸಂಭವ,
ಸಹಜಾ - ಕೃತಕ,
ಕುಣಿದಾವ ಥಕಥಕ..

ಸತ್ಯ ಅಜ,
ಸತ್ಯಜ ಸಹಜ,
ಅಸಹಜ ಕೃತಕ,
ಸತ್ಯಾ ನಜ ಕೃತಕ.

ಅಸತ್ಯ ನಿತ್ಯದಿ
ಕೃತಕಾಸಹಜ;
ಅಸಹಜಾಸತ್ಯದಿ
ಮಿಥ್ಯಾತಥ್ಯ.

ಮಸ್ತಿಷ್ಕ ಸತ್ಯ,
ಮನ ಮಿಥ್ಯ?
ಹೃದಯ ಸಹಜ,
ಮಿಡಿತ ಕೃತಕ?

ಬಿತ್ತದ್ದು ಕೃತಕ?
ಹುಟ್ಟಿದ್ದು ಸಹಜ,
ಸತ್ತಿದ್ದೂ ಸಹಜ..,
ಅತ್ತಿದ್ದು...?
ಮರುಸೃಷ್ಟಿ?

ಯದ್ಭಾವಂ...

ನನಗಿನ್ನು?
ನೆನಪು
ನೀನು
ಕೇಳಿದ್ದು
ಮತ್ತೆ
ಕೇಳದ್ದು
ಎನ್ನ
ಕೇಳಲಾಗದ್ದು
ಇನ್ನು
ನೆನಪು
ದುರದೃಷ್ಟ
ಮರೆವಲ್ಲ
ನಿನಗೆ
ಗೊತ್ತು, ನನಗ್ಗೊತ್ತು...

ನನಗಿನ್ನೂ!

ಬುಧವಾರ, ಫೆಬ್ರವರಿ 23, 2011

ಅದರರ್ಥಹೀನತೆ

ಆಕಾಶಬೀದಿಯಲಿ ವಿಹಗವಿಹಾರ
ತೂರಿ ತರಗೆಲೆಯಾಗಿ ತೇಲಿ ಪಟವಾಗಿ
ಮೀರ ಹೊರಟುದದು ಬದುಕೆಂದೆಯಾ...
ಹಾರಾಟವಿದು ಹೋರಾಟವೆಂದೆಯಾ.

ಬದುಕ ಹುಚ್ಚು ಹರಿವುಗಳಲಿ
ಅನೂಹ್ಯ ದೊರಕಲು ಕೊರಕಲುಗಳಲಿ
ಅಲೆ ಏರಿಳಿದು ಅಲೆದಲೆದು...
ಅಂತ ಶಾಂತೋದಧಿಯೆಂದೆಯಾ
ತಿರುಗಿ ಮೇಘದಿ ನಿಂದೆಯಾ...

ಬಚ್ಚ ಬಯಲಲಿ ತಿರುಗಾಟ
ಅದರರ್ಥಹೀನತೆ ಪರಮಾರ್ಥ
ಮರುಳಾದುದೇ ತಿರುಳೆಂದೆಯಾ...
ಇರುಳ ಮಬ್ಬುಗತ್ತಲಲಿ 
ಬರಿದೇ ಬತ್ತಲಾದೆಯಾ..?..

___ಗೆ

ನಡುರಾತ್ರಿಯ
ನಿಬಿಡ ಮೋಡಗಳ
ಬಡನಡುಗಳ ಬಳಸಿ..,
ಇಣುಕುತಿಹ ಚಂದ್ರ ನಾ
ನಿನ್ನೊಡಲಾಳ ಕೊಳದಲಿ


ಕ್ಷಣವಾಯ್ತು ದಿನವಾಯ್ತು
ವರುಷ ಎಷ್ಟಾಯಿತೆ ಚವತಿ
ಕ್ಷಣಕೇನು ದಿನಕೇನು
ಸವಿಯುವುದರಲಿ ಸವೆಯುವವು
ವರುಷ ಇಪ್ಪತ್ತೆರಡು
ಯುಗಕಳೆಯಲಿಲ್ಲ...


..ಹರುಷಿಸಲಾದರೋ ಹೊಸ
ನೆಪವೊಂದು ಬೇಕಲ್ಲ!
ಬದುಕಿನಲಿ ನವವರುಷ
ತೇಲಿ ಬರುತಿಹುದಲ್ಲ :)


..ನಿನ್ನ ಹೊಸ ಅಧ್ಯಾಕೆನ್ನ
               ಒಸಗೆಯ ಶುಭಾಶಯ..
 
|| ರಾತ್ರಿ ೧೨:೪೫ , ಆಗೋಸ್ತು ೨೦೦೭ ||

ಅಮಾವಾಸ್ಯೆ ---> ವಸಂತ


ಮೇಘಮಾಲೆಗಳಿಲ್ಲ
ಖಗವಿಹಗಗಳಿಲ್ಲ
ಇದ್ದರೂ ಕಾಣಲ್ಲ
ಕಂಡರೂ ಕಣ್ ಸೆಳೆಯಲ್ಲ
ಬೆಳಕು ಬರೀ ಚುಕ್ಕಿ

ರಾತ್ರಿಯಿದು ಅಮಾವಾಸ್ಯೆಯಲ್ವ?


ಜೀವನದೊಲವಿಲ್ಲ
ನಿರ್ಜೀವ ಜಗವೆಲ್ಲ
ಹೊರಗೇನೂ ಇಲ್ಲ
ಒಳಗೇನೂ ಇಲ್ಲ
ಶತ್ರು! -ಕಂಡಿದ್ದೆಲ್ಲ
ನಿನ್ನೊಳಿದು ಎನ್ನಮವಾಸ್ಯೆಯಲ್ವ?


ಮನ ಮೂಡಣದಿ ನಾ ಮೂಡಿ
ಸಪ್ತವರ್ಣಗಳ ಬೀರಿ
ಸುಪ್ತವರ್ಣಗಳ ನೀ ಹೊಮ್ಮರಳಿಸೆ
ಮೇಘಮಂದಾರಮಾಲೆ
ಖಗ ವಿಹಗ ಚುಕ್ಕಿ ಚಿತ್ತಾರ
ನಿಮ್ಮನಬನದೊಳೆಮ್ಮ ವಸಂತ!

ಶೂನ್ಯಘಟಿ

ಕ್ಷಣಮಾತ್ರದಲಿ ಖಾಲಿ...
ತನುಗಳೆದು ಮನಗಳೆದು
ಅಳಿದುಳಿದಿಹ ಖಾಲಿತನ
ತೋರುತಿಹ ತನವೇನು?


ನೂರು ಭಾವಗಳ ತೂರಿ
ಮೊಗ ಶೂನ್ಯವ ಬೀರಿ
ಕಂಗಳ ನಿರ್ಭಾವುಕ ಭಾವ
ಚೀರುತಿಹುದು ಏನು?


ಪದಪಾತ್ರೆ ಸೋರಿ
ಬರಿದು ತಳದಲಿ
ಎರೆಡೂವರೆ ಅಕ್ಷರಗಳು
ಗೀರಿ ಹೋದುದು ಏನು?


ಅರ್ಥಪೂರ್ಣತೆಯಿಂದ
ಅರ್ಥ ಜಾರಿದ ಕ್ಷಣ
ಪೂರ್ಣ-ತಾ-ಭಾವ-
ಶೂನ್ಯ ಘಟಿಸಿತೇನು?


ಒಂದು ಎರಡಾದುದಂದು
ತಿರುಗದಂತೆ  ನಡೆದುದಂದು
ನಡುವೆ ವಿ-ಸರ್ಗ ಮೌನ
ತೊದಲುತಿಹುದು ಏನು?

ಕಾಳಿಂಗ

ಅಪಠ್ಯ ಪಥ ಪಥ್ಯವಾಗುತಿರೆ ಪಥಿಕ
ನ ಪದಪದದ ಪ್ರತಿ ಚಿಮ್ಮುವ ಪ್ರತೀ
ಪದ ಪಾದಪ್ರತಿಗಳಲಿ ಹೊಮ್ಮಿ
ಸುವ  ಸಹಸ್ರಾರ್ಥ ಹೆಡೆಗಳ ಪದಲಯ
ಬದ್ಧ ನರ್ತನದ ನಡುನಡುವೆ ಅಲ್ಲಲ್ಲಿ ಅಬದ್ಧ-ಪ್ರ
ಬುದ್ಧ ನೆನಪುಗಳ ಕೊಡ ತುಳುಕಿ ನಡು ಬಳುಕಿ ಉಳುಕಿ
ರೆ ಪಾದಪದ್ಮಂಗಳು ಬದ್ಧ
ಗಳ ಲಯ
ದಿ ಉಮ್ಮಳಿಸಿ
ಹ ನವಾಪಾರ್ಥ ಪ್ರತಿಪದ
ತಲದಿ ಕಾಳಿಂಗ!

ಮಳೆ ಮಳೆ ಮಳೆ ಮಳೆ...

ಮಾರುತ ಪೀಡಿತ
ಸಾಗರನೊಡಲು
ಕದಡಲು ಮೂಡಿತು
ಮೋಡದ ಕಡಲು


ನೀರವ ತಾಳದೆ
ನಿರ್ವಾತದೀss
ನೀರಂವss ತಾ
ತಂದ! ನೀರ ವಾತ.
 
ವರ್ಷಳ ಬಗೆಯಲಿ
ರವಿ ಎದೆ ಬಗೆದ
ಬಗೆ ಬಗೆ ಬಣ್ಣದಿ
ಬಗೆದುದ ಒಗೆದ.
 
ಬಾನಲಿ ಭಾನು
ತೋರಿದ ತೂರಿದ
ತೀಡಿದ ತಿದ್ದಿದ
ಕಾಮದ ಬಿಲ್ಲ!


ಹನಿಹನಿ ಇನಿಯಲಿ
ಇನಿಯನ ಇಂಚರ
ಮಿಲನದ ಮುಂಚಿನ
ಕಾತರ ದಾತುರ


ಗಿರಿ-ವನ-ಗಹ್ವರ
ಮೇಘಳ ಮರ್ಮರ
ಅವಳೆದೆ ಗುಡಗುಡಿ
ಗುಡುಗುಡುಗುಡುಗುಡು..
 
ವಾತನ ಬಡಿತ
ಗಿರಿಗಳ ತಡೆತ
ತಪ್ಪಿತೋ ಹಿಡಿತ!
ಮೇಘಳ ತುಡಿತ
 
ಒಡನೆಯೆ ಒಡೆಯಲು
ಮೋಡದ ಮಾಡು
ಸಿಡಿ ಸಿಡಿ ಸಿಡಿಲು
ಸಿಡಿಲೋ ಸಿಡಿಲು
ಮಳೆ ಮಳೆ ಮಳೆ ಮಳೆ...


ಅಂಜಿಕೆಯಂಚು
ಮೀರಲು ಮಿಂಚು
ವರ್ಷಳ ಸ್ಪರ್ಶ
ವರ್ಷದ ಹರ್ಷ.

ಶುಕ್ರವಾರ, ಸೆಪ್ಟೆಂಬರ್ 10, 2010

The Madness





































-:ಹುಚ್ಚು:-


ಹುಚ್ಚೆಂದರೇ
ನೆಂಬುದನ್ನೇ ನಾನು ನೋಡಿದ್ದು
ನೀನೇನು..
ವಿವರ್ತಿಸುತ್ತ ನನ್ನೊಳಗೆ  ತಾದಾತ್ಮ್ಯದಲ್ಲಿ
ಧಿಮಾಕಿನಲ್ಲಿ


ತಪ್ಪಾಗಿ ನಿಭಾಯಿಸುವುದ ನಿಭಾಯಿಸು
ವುದದನ್ನೇ ಮಾಡಿದ್ದು ನಾ
ಕಾಣುವಂತೆ
ನೀನೇನು..
ಭಂಗಿಸುತ್ತ ಎನ್ನದೇ ಸಮೀಕರಣಗಳ...
ದುರದೃಷ್ಟ ಎಡವು
ಬಲವಾಗಿ  ಬಿಡದಲ್ಲವಾ ಎಂದೂ..?